ಮಹಾರಾಷ್ಟ್ರ ಮುಖ್ಯಮಂತ್ರಿ ಪಟ್ಟಕ್ಕೆ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ಮುಖ್, ಮಾಜಿ ಕಂದಾಯ ಸಚಿವ ನಾರಾಯಣ ರಾಣೆ ಭಾರೀ ಲಾಬಿ ನಡೆಸುತ್ತಿದ್ದು, 9 ತಿಂಗಳ ಕಾಲ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ ಅಶೋಕ್ ಚವಾಣ್ ಕಡೆಗೆ ಮುಖ್ಯಮಂತ್ರಿ ಪಟ್ಟ ವಾಲುವ ಲಕ್ಷಣ ಕಂಡುಬಂದಿವೆ.
ಆದರೆ ದೇಶ್ಮುಖ್ ಬಹಿರಂಗವಾಗಿ ಮುಖ್ಯಮಂತ್ರಿ ಗದ್ದುಗೆಗೆ ಬಯಕೆ ವ್ಯಕ್ತಪಡಿಸಿದ್ದರಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷವು ಶನಿವಾರ ಸಭೆ ಸೇರಿ ಮುಖ್ಯಮಂತ್ರಿ ಪಟ್ಟಕ್ಕೆ ಆಯ್ಕೆ ಮಾಡುವ ನಿರ್ಧಾರವನ್ನು ಸೋನಿಯ ಸುಪರ್ದಿಗೆ ಬಿಟ್ಟಿದ್ದಾರೆ. 'ನಾನು ಹೈಕಮಾಂಡ್ ಹೇಳಿದ್ದನ್ನೆಲ್ಲ ಶಿರಸಾವಹಿಸಿ ಪಾಲಿಸಿದೆ. ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಎರಡು ಬಾರಿ ರಾಜೀನಾಮೆ ನೀಡಿದೆ. ಈಗ ಕೇಂದ್ರ ಸಚಿವನನ್ನಾಗಿ ಮಾಡಿದ್ದಾರೆ.
ನಾನು ನಿಷ್ಠ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಅದೇ ನನ್ನ ಹಿನ್ನೆಲೆಯೆಂದು' ವಿಲಾಸ್ ರಾವ್ ದೇಶ್ಮುಖ್ ಹೇಳಿದ್ದಾರೆ. ಈಗ ಚವಾಣ್, ದೇಶ್ಮುಖ್ ಮತ್ತು ರಾಣೆ ದೆಹಲಿ ಯಾತ್ರೆ ಕೈಗೊಂಡಿದ್ದು, ಶನಿವಾರ ರಾತ್ರಿ ಸೋನಿಯ ಅವರನ್ನು ಭೇಟಿ ಮಾಡುವರೆಂದು ನಿರೀಕ್ಷಿಸಲಾಗಿದೆ. ಆದರೆ ಮುಂಬೈ ಭಯೋತ್ಪಾದನೆ ದಾಳಿಯ ಬಳಿಕ ಮುಖ್ಯಮಂತ್ರಿ ಹುದ್ದೆಯಿಂದ ದೇಶ್ಮುಖ್ ಬಲವಂತದಿಂದ ನಿರ್ಗಮಿಸಿದ ಘಟನೆ ಇನ್ನೂ ಹಸಿರಾಗಿಯೇ ಉಳಿದಿದ್ದು, ದೇಶ್ಮುಖ್ ಪಾಲಿಗೆ ಮೈನಸ್ ಪಾಯಿಂಟ್ ಎನಿಸಿದೆ.
ಅಶೋಕ್ ಚವಾಣ್ ಒಂದು ವರ್ಷ ಮುಖ್ಯಮಂತ್ರಿ ಅವಧಿ ಪೂರೈಸಿಲ್ಲ. ಆದರೆ ಪಕ್ಷವನ್ನು ಜಯದ ಹೊಸ್ತಿಲಿಗೆ ತಂದಿರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೀಗಾಗಿ ಅವರ ಕಡೆಗೆ ಹೆಚ್ಚಿನ ಒಲವು ವರಿಷ್ಠ ಮಂಡಳಿಯಲ್ಲಿ ವ್ಯಕ್ತವಾಗಿದೆಯೆಂದು ತಿಳಿದುಬಂದಿದೆ.