ಕರ್ನಾಟಕ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಮಾಲಕತ್ವದ ಒಬಳಾಪುರಂ ಮೈನಿಂಗ್ ಕಂಪೆನಿಯು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಮಂಗಳವಾರ ತನಿಖೆಗೆ ಆದೇಶಿಸಿದೆ. ಈ ಕಂಪೆನಿಯ ಮೇಲಿರುವ ಆರೋಪಗಳ ತನಿಖೆಗಾಗಿ ಮುಖ್ಯಮಂತ್ರಿ ಕೆ. ರೋಸಯ್ಯ ಅವರು ತ್ರಿಸದಸ್ಯ ಸಮಿತಿಯೊಂದನ್ನು ನೇಮಿಸಿದ್ದು 10 ದಿನಗಳೊಳಗಾಗಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
ತೆಲುಗುದೇಶಂ ಪಕ್ಷ ಹಾಗೂ ಇತರ ವಿರೋಧ ಪಕ್ಷಗಳು ಒಬಳಾಪುರಂ ಮೈನಿಂಗ್ ಸಂಸ್ಥೆಯ ಮೇಲಿರುವ ಆಪಾದನೆಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಈ ತನಿಖೆಗೆ ಆದೇಶಿಸಲಾಗಿದೆ. 500 ಕೋಟಿ ರೂಪಾಯಿ ಮೊತ್ತದ ಕಬ್ಬಿಣದ ಅದಿರನ್ನು ಕಾನೂನು ಬಾಹಿರವಾಗಿ ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಸಾಗಿಸಿರುವ ಆರೋಪವನ್ನು ಒಬಳಾಪುರಂ ಮೈನಿಂಗ್ ಸಂಸ್ಥೆ ಎದುರಿಸುತ್ತಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಒಬ್ಬ ಅರಣ್ಯಾಧಿಕಾರಿ ಅವ್ಯವಹಾರಗಳ ಕುರಿತು ಕಂಪೆನಿಗೆ ನೋಟೀಸು ಜಾರಿ ಮಾಡಿದ್ದಾರೆ. ಇದು ಅಕ್ಟೋಬರ್ 26ರ ಬಳಿಕ ಕಂಪೆನಿಗೆ ನೀಡುತ್ತಿರುವ ಐದನೇ ನೋಟೀಸ್ ಆಗಿದೆ.
ಅಕ್ರಮ ಗಣಿಗಾರಿಗೆ, ಅರಣ್ಯಭೂಮಿ ಒತ್ತುವರಿ, ಅಂತೆಯೇ ಇತರ ಕಂಪೆನಿಗಳ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ, ಅರಣ್ಯದಲ್ಲಿ ಅಕ್ರಮವಾಗಿ ರಸ್ತೆಗಳ ನಿರ್ಮಾಣ ಹಾಗೂ ಪರವಾನಿಗೆಯನ್ನು ಉಲ್ಲಂಘಿಸಿ ಅದಿರು ಸಾಗಣೆ ಮುಂತಾದ ಆರೋಪಗಳನ್ನು ನೋಟೀಸಿನಲ್ಲಿ ಹೊರಿಸಲಾಗಿದೆ.
ಅನಂತಪುರ ಜಿಲ್ಲೆಯ ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿರುವ ಒಬಳಾಪುರಂ ಹಾಗೂ ಇತರ ಕಬ್ಬಿಣದ ಅದಿರು ಗಣಿಗಾರಿಕಾ ಪ್ರದೇಶಗಳಿಗೆ ಭೇಟಿ ನೀಡುವ ತ್ರಿಸದಸ್ಯ ಸಮಿತಿಯು ಬಳಿಕ 10 ದಿನಗಳೊಳಗಾಗಿ ವಿಸ್ತೃತ ವರದಿ ನೀಡಲಿದೆ ಎಂಬುದಾಗಿ ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ. ಹಿರಿಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಿದ್ದಾರೆ.
ಅರಣ್ಯ ಹಾಗೂ ಉದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.