ಕರ್ನಾಟಕ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಮಾಲಕತ್ವದ ಓಬಳಾಪುರಂ ಗಣಿಗಾರಿಕಾ ಕಂಪೆನಿಯ ಅಕ್ರಮ ವ್ಯಹಹಾರಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರಜಾರಾಜ್ಯಂ ಪಕ್ಷದ ನಾಯಕ ನಟ, ಚಿರಂಜೀವಿ ಆಂಧ್ರ ಮುಖ್ಯಮಂತ್ರಿ ಕೆ.ರೋಸಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಪ್ರಜಾರಾಜ್ಯಂ ಪಕ್ಷದ ಮುಖಂಡ ಚಿರಂಜೀವಿ ಶುಕ್ರವಾರದಂದು ಮುಖ್ಯಮಂತ್ರಿ ಕೆ.ರೋಸಯ್ಯ ಅವರನ್ನು ಭೇಟಿ ಮಾಡಿ ಒಬಳಾಪುರಂ ಗಣಿಗಾರಿಕೆ ಅವ್ಯವಹಾರಗಳ ಬಗ್ಗೆ ಸಂಪೂರ್ಣ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅವರೂ ಸಹ ರೆಡ್ಡಿಗಳ ಗಣಿಗಾರಿಕಾ ಕಂಪೆನಿಯ ವ್ಯವಹಾರಗಳ ಬಗ್ಗೆ ತನಿಖೆಗೆ ಒತ್ತಾಯಿಸಿದ್ದು, ಆಂಧ್ರದಲ್ಲಿ ರೆಡ್ಡಿಗಳ ವಿರುದ್ಧ ಕಾನೂನು ಕುಣಿಕೆಯನ್ನು ಬಿಗಿಗೊಳಿಸುವ ಪ್ರಯತ್ನ ನಡೆಯುತ್ತಿದೆ.
ಕೇಂದ್ರ ಸರಕಾರ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ ಅವರ ಗಣಿಗಾರಿಕೆ ವಿಷಯವನ್ನು ಚರ್ಚೆಗೆ ತೆಗೆದುಕೊಂಡಿದ್ದು, ಓಬಳಾಪುರಂ ಗಣಿಗಾರಿಕೆ ಬಗ್ಗೆ ಯಾಕೆ ತನಿಖೆ ಕೈಗೊಳ್ಳುತ್ತಿಲ್ಲ ಎಂದು ಚಂದ್ರಬಾಬು ನಾಯ್ಡು ಪ್ರಶ್ನಿಸಿದ್ದರು. ಇದೀಗ ನಾಯ್ಡು ಒತ್ತಾಯಕ್ಕೆ ಪೂರಕ ಎಂಬಂತೆ ಚಿರಂಜೀವಿ ಅವರ ಒತ್ತಾಯವೂ ಕೇಳಿಬಂದಿದೆ.
ಒಬಳಾಪುರಂ ಗಣಿಗಾರಿಕೆ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿರುವ ತೆಲಗುದೇಶಂ ಪಕ್ಷದ ನಾಯಕರು ಸಚಿವಾಲಯದ ಎದುರುಗಡೆ ಧರಣಿ ನಡೆಸಿ, ಗಣಿಗಾರಿಕೆ ಭೋಗ್ಯಕ್ಕೆ ಸಂಬಂಧಿಸಿದ ವಿಷಯ ಕುರಿತಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.