ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೆಟ್ ಲಾಸ್ಟ್: ಪತ್ರಕರ್ತರ ವಿರುದ್ಧ ಲಿಬರ್ಹಾನ್ ಕೆಂಡಾಮಂಡಲ (Babri masjid | Advani | Atal Bihari vajapeeyi | BJP | New indian express)
ಗೆಟ್ ಲಾಸ್ಟ್: ಪತ್ರಕರ್ತರ ವಿರುದ್ಧ ಲಿಬರ್ಹಾನ್ ಕೆಂಡಾಮಂಡಲ
ನವದೆಹಲಿ:, ಸೋಮವಾರ, 23 ನವೆಂಬರ್ 2009( 19:38 IST )
PTI
'ಏನ್ ನಿಮ್ಮ ಮಾತಿನ ಅರ್ಥ, ನಾನು ಯಾವ ಪ್ರಶ್ನೆಗೂ ಉತ್ತರ ಕೊಡಲಾರೆ ಗೆಟ್ ಲಾಸ್ಟ್ ಫ್ರಮ್ ದಿ ಪ್ರಿಮೈಸಸ್' ಹೀಗೆ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕಿಡಿಕಾರಿದವರು ರಾಷ್ಟ್ರದಾದ್ಯಂತ ವಿವಾದದ ಕಿಡಿ ಹೊತ್ತಿಸಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಆಯೋಗದ ಮುಖ್ಯಸ್ಥ ಎಂ.ಎಸ್.ಲಿಬರ್ಹಾನ್.
ಲಿಬರ್ಹಾನ್ ಆಯೋಗದ 700ಪುಟಗಳ ವರದಿಗೆ ಸಂಬಂಧಿಸಿದಂತೆ ಸೋಮವಾರದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ, ಬಾಬರಿ ಮಸೀದಿ ಧ್ವಂಸದ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ವರಿಷ್ಠ ಲಾಲ್ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಇದ್ದಿರುವುದಾಗಿ ಉಲ್ಲೇಖಿಸಿ ವರದಿ ಪ್ರಕಟಿಸಿತ್ತು. ಈ ವರದಿ ಇಂದು ಸಂಸತ್ನ ಎರಡು ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು.
ಆದರೆ ಬಾಬರಿ ಮಸೀದಿ ಧ್ವಂಸ ಪ್ರಕರಣದ ಲಿಬರ್ಹಾನ್ ವರದಿ ಸಂಸತ್ನಲ್ಲಿ ಮಂಡನೆಯಾಗದೆ ಪತ್ರಿಕೆಗೆ ಹೇಗೆ ಸೋರಿಕೆಯಾಯಿತು ಎಂಬ ಬಿಸಿ, ಬಿಸಿ ಚರ್ಚೆ ಕಲಾಪದಲ್ಲಿ ನಡೆಯಿತು.
ಈ ಕುರಿತು ಲಿಬರ್ಹಾನ್ ಆಯೋಗದ ಮುಖ್ಯಸ್ಥ ಎಂ.ಎಸ್.ಲಿಬರ್ಹಾನ್ ಅವರನ್ನು ಸುದ್ದಿಗಾರರು ಭೇಟಿ ನೀಡಿ ಕೇಳಿದ ಪ್ರಶ್ನೆಗೆ ಕೆಂಡಾಮಂಡಲರಾದ ಅವರು, ಆಯೋಗದ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವಂತಹ ಕೀಳುಮಟ್ಟದ ವ್ಯಕ್ತಿ ನಾನಲ್ಲ. ಗೆಟ್ ಲಾಸ್ಟ್ ಎಂದು ಗುಡುಗಿದ ಘಟನೆ ನಡೆಯಿತು.