'ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತನ್ನ ಪಾತ್ರ ಇದೆ ಎಂಬ' ಲಿಬರ್ಹಾನ್ ಆಯೋಗದ ವರದಿಯಲ್ಲಿನ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್, ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಈಗಲೂ ಯಾವುದೇ ಪಶ್ಚಾತ್ತಾಪ ಇಲ್ಲ, ಅಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳುವ ಮೂಲಕ, ಬಿಜೆಪಿಯತ್ತ ಮರಳುವ ಸಂಕೇತಗಳನ್ನು ನೀಡಿದ್ದಾರೆ.
ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಕೊನೆಗೂ ಮಂಗಳವಾರ ಸಂಸತ್ನಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ಲಿಬರ್ಹಾನ್ ಆಯೋಗದ ವರದಿಯನ್ನು ಮಂಡಿಸಿತ್ತು. ವರದಿಯ ಮಂಡನೆ ನಂತರ ಆರೋಪ-ಪ್ರತ್ಯಾರೋಪಗಳು ಹೊರಬೀಳುತ್ತಿರುವಂತೆಯೇ, ಮಸೀದಿ ಧ್ವಂಸದ ಪ್ರಕರಣದಲ್ಲಿ ಕಲ್ಯಾಣ್ ಸಿಂಗ್ ಪಾತ್ರ ಇದೆ ಎಂಬ ಉಲ್ಲೇಖ ವರದಿಯಲ್ಲಿ ಇದ್ದಿರುವ ಹಿನ್ನೆಲೆಯಲ್ಲಿ ಈ ಕುರಿತು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
1992 ಡಿಸೆಂಬರ್ 6ರಂದು ಅಂದಿನ ನನ್ನ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಭದ್ರತೆ ಒದಗಿಸಿತ್ತು. ವಿವಾದಿತ ಪ್ರದೇಶದೊಳಗೆ ಬಾರದಂತೆ ಕರಸೇವಕರನ್ನು ಭದ್ರತಾ ಸಿಬ್ಬಂದಿಗಳು ತಡೆದಿದ್ದರು. ಆದರೆ ರೊಚ್ಚಿಗೆದ್ದ ಕರಸೇವಕರು ಒಳಪ್ರವೇಶಿಸಿದ್ದರು. ಅಲ್ಲದೆ, ಕರಸೇವಕರ ಮೇಲೆ ಗೋಲಿಬಾರ್ ಮಾಡದಂತೆ ಆದೇಶ ನೀಡಿರುವುದಾಗಿಯೂ ಆರೋಪಿಸಲಾಗಿದೆ ಎಂಬುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಸಿಂಗ್, ಆ ಸಂದರ್ಭದಲ್ಲಿ ಗೋಲಿಬಾರ್ ಮಾಡಲು ಆದೇಶಿಸಿದ್ದರೆ ಸಾವಿರಾರು ಮಂದಿ ಕರಸೇವಕರು ಬಲಿಯಾಗುತ್ತಿದ್ದರು. ಇದರಿಂದ ಮತ್ತಷ್ಟು ಗಲಭೆ ಸೃಷ್ಟಿಯಾಗುತ್ತಿತ್ತು ಎಂದು ವಿವರಿಸಿದರು.
ಲಿಬರ್ಹಾನ್ ವರದಿ ಸಂಪೂರ್ಣವಾಗಿ ರಾಜಕೀಯ ಉದ್ದೇಶದಿಂದ ಕೂಡಿರುವುದಾಗಿ ಆರೋಪಿಸಿದ ಕಲ್ಯಾಣ್ ಸಿಂಗ್, ರಾಮಮಂದಿರ ನಿರ್ಮಾಣಕ್ಕಾಗಿ ಜೈಲಿಗೆ ಹೋಗಲು ಸಿದ್ದವಿರುವುದಾಗಿಯೂ ಹೇಳುವ ಮೂಲಕ ಬಿಜೆಪಿಯತ್ತ ತಮ್ಮ ಒಲವು ಮತ್ತೆ ಜೀವಂತವಿರುವುದನ್ನು ಪರೋಕ್ಷವಾಗಿ ಹೊರಹಾಕಿದಂತಾಗಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷಕ್ಕೆ ಕಲ್ಯಾಣ್ ಸಿಂಗ್ ಸೇರ್ಪಡೆಗೊಂಡಿದ್ದರು. ಆದರೆ ಸಮಾಜವಾದಿ ಪಕ್ಷದಲ್ಲೂ ಜಟಾಪಟಿ ನಡೆದು ಸಿಂಗ್ ಅಲ್ಲಿಂದಲೂ ಹೊರಬಂದಿದ್ದಾರೆ.
ಲಿಬರ್ಹಾನ್ ವರದಿಯಲ್ಲಿ ತಮ್ಮ ಪಾತ್ರದ ಕುರಿತು ಉಲ್ಲೇಖಿಸಿರುವುದರ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಅವರು, ವಿವಾದಿತ ಕಟ್ಟಡ ಉರುಳಿಸಲು ಯಾವುದೇ ಸಂಚು ರೂಪಿಸಿರಲಿಲ್ಲವಾಗಿತ್ತು. ಅದು ಕರಸೇವಕರ ಆಕ್ರೋಶಕ್ಕೆ ಆ ಸಂದರ್ಭದಲ್ಲಿ ಧ್ವಂಸಗೊಂಡಿತ್ತು ಎಂದರು.