ಕಾರವಾರದ ಅಣುವಿದ್ಯುತ್ ಸ್ಥಾವರದಲ್ಲಿನ ವಾಟರ್ ಕೂಲರ್ಗೆ ಟ್ರೀಶಿಯಂ ಮಿಶ್ರಣ ಮಾಡಿದ ಘಟನೆ ಸಂಭವಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಥಾಣೆಯ ತಾರಾಪುರದಲ್ಲಿನ ಬಿಗಿ ಭದ್ರತೆ ಹೊಂದಿರುವ ಅಣುಸ್ಥಾವರದಲ್ಲಿ ಕಳ್ಳತನ ಯತ್ನ ನಡೆಸಿದ್ದು, ಇಬ್ಬರು ಖದೀಮರು ಸಿಕ್ಕಿಬಿದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತಾರಾಪುರ ಘಟನೆಯಿಂದಾಗಿ ಭದ್ರತಾ ವ್ಯವಸ್ಥೆಯ ಮೇಲೆ ಅಪನಂಬಿಕೆ ಬರುವಂತಾಗಿದೆ. ಬಂಧಿತರನ್ನು ಚೀನಾ ಇಂಜಿನಿಯರಿಂಗ್ ಪ್ರಶಾಂತ್ ಮೋರೆ ಹಾಗೂ ಯಶ್ ಟ್ರಾವೆಲ್ಸ್ನ ಅಮಿತ್ ಶೆಲ್ಕೆ ಎಂದು ಹೇಳಲಾಗಿದ್ದು ಇವರಿಬ್ಬರು ತಾರಾಪುರ ಅಣು ಸ್ಥಾವರದಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇವರಿಬ್ಬರೂ ಮಹತ್ವದ ದಾಖಲೆ ಹೊಂದಿದ್ದ ಕಂಪ್ಯೂಟರ್ ಮತ್ತು ಅದರ ಬಿಡಿ ಭಾಗಗಳನ್ನು ಕಳವು ಮಾಡಿ ಸಾಗಿಸುತ್ತಿರುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳ ಕೈಗೆ ಸಿಕ್ಕಿ ಬಿದ್ದಿದ್ದರು.
ಕೇಂದ್ರ ಕೈಗಾರಿಕಾ ಕಾವಲು ಪಡೆ ಸಿಬ್ಬಂದಿ ಇವರನ್ನು ತಪಾಸಣೆಗೊಳಪಡಿಸಿ ವಶಕ್ಕೆ ತೆಗೆದುಕೊಂಡಿತ್ತು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.