ಹಿಂದೂ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆ ಕೈವಾಡವಿದೆ ಎಂದು ಹೇಳಲಾಗಿರುವ ಮಡ್ಗಾಂವ್ ಸ್ಫೋಟ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೈಗೆತ್ತಿಕೊಂಡಿದೆ.
ಮಡ್ಗಾಂವ್ ಸ್ಫೋಟ ಪ್ರಕರಣವನ್ನು ತಾವು ಕೈಗೆತ್ತಿಕೊಂಡಿದ್ದು, ಈ ಸಂಬಂಧ ಎರಡು ಭಿನ್ನ ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ರಾಷ್ಟ್ರೀಯ ತನಿಖಾ ದಳವು ದಕ್ಷಿಣ ಗೋವಾ ಜಿಲ್ಲೆ ಮತ್ತು ಸೆಶನ್ಸ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ ಎಂದು ಗೋವಾ ಪೊಲೀಸ್ ವಕ್ತಾರ ಅತ್ಮರಾಮ್ ದೇಶಪಾಂಡೆ ತಿಳಿಸಿದ್ದಾರೆ.
ಅಕ್ಟೋಬರ್ 16ರಂದು ನಡೆದಿದ್ದ ಮಾಡ್ಗಾಂವ್ ಸ್ಫೋಟ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್ಐಟಿ ಅಥವಾ ಸಿಟ್)ದಿಂದ ರಾಷ್ಟ್ರೀಯ ತನಿಖಾ ದಳಕ್ಕೆ ಕೇಂದ್ರ ಸರಕಾರವು ಹಸ್ತಾಂತರಿಸಿ ಆದೇಶ ಹೊರಡಿಸಿತ್ತು.
ಕಳೆದ ವರ್ಷದ ಮುಂಬೈ ಉಗ್ರರ ದಾಳಿ ಮತ್ತು ಇತರ ಉಗ್ರಗಾಮಿ ಕೃತ್ಯಗಳ ತನಿಖೆಯನ್ನು ಕೂಡ ಇದೇ ಸಂಸ್ಥೆ ನಡೆಸುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಟ್ ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ಅವರೆಲ್ಲರೂ ಹಿಂದೂ ಗೋವಾದ ಸಂಘಟನೆ ಸನಾತನ್ ಸಂಸ್ಥೆ ಜತೆ ಸಂಬಂಧ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟಕಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದ ಕಾರಣ ಮಾಲ್ಗೊಂಡ ಪಾಟೀಲ್ ಮತ್ತು ಯೋಗೇಶ್ ನಾಯ್ಕ್ ಎಂಬಿಬ್ಬರು ಆರೋಪಿಗಳು ಸಾವನ್ನಪ್ಪಿದ್ದರು. ಇವರು ಸನಾತನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು ಎಂದು ಸಿಟ್ ತನ್ನ ತನಿಖೆಯ ಸಂದರ್ಭದಲ್ಲಿ ಬಹಿರಂಗಪಡಿಸಿತ್ತು.