ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವುದನ್ನು ವಿರೋಧಿಸಿ ಗುರುವಾರ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದ್ದು ಹೈದರಾಬಾದ್ನಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಈ ಸಂದರ್ಭದಲ್ಲಿ ಟಿಡಿಪಿ ಶಾಸಕ ಎನ್.ಜನಾರ್ದನ ರೆಡ್ಡಿ ಅವರಿಗೆ ಚಪ್ಪಲಿ ಏಟು ಬಿದ್ದಿರುವ ಘಟನೆ ನಡೆಯಿತು.
ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆಯನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಉಸ್ಮಾನಿಯ ಯೂನಿರ್ವಸಿಟಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕ್ಯಾಂಪಸ್ನೊಳಗೆ ಆಗಮಿಸಿದ್ದ ಟಿಡಿಪಿ ಶಾಸಕರ ಮೇಲೆ ಚಪ್ಪಲಿ ಎಸೆದು, ಹಿಗ್ಗಾಮುಗ್ಗಾ ಥಳಿಸಿದರು. ಅಲ್ಲದೆ, ಶಾಸಕರ ಕಾರುಗಳನ್ನು ಜಖಂಗೊಳಿಸಿದರು.
ವಿದ್ಯಾರ್ಥಿಗಳು ಉದ್ರಿಕ್ತರಾದ ಪರಿಣಾಮ ಟಿಡಿಪಿ ಹಿರಿಯ ಮುಖಂಡ ಎನ್.ಜನಾರ್ದನ ರೆಡ್ಡಿ ಅವರು ತಳ್ಳಾಟದಲ್ಲಿ ನೆಲಕ್ಕುರುಳಿದ್ದರು. ಈ ಸಂದರ್ಭದಲ್ಲಿ ಚಪ್ಪಲಿ ಏಟು ಕೂಡ ಬಿದ್ದಿತ್ತು ಎಂದು ಮೂಲಗಳು ತಿಳಿಸಿವೆ.
ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆಂಬ ಮಾಹಿತಿ ದೊರೆತ ನಂತರ ಟಿಡಿಪಿಯ ಶಾಸಕ ಜನಾರ್ದನ ರೆಡ್ಡಿ, ಇ.ದಯಾಕರ್ ರಾವ್, ಹಿರಿಯ ಮುಖಂಡರಾದ ದೇವೇಂದರ್ ಗೌಡ್ ಮತ್ತು ಕಾಡಿಯಂ ಶ್ರೀಹರಿ ಕಾಲೇಜ್ ಕ್ಯಾಂಪಸ್ಗೆ ಭೇಟಿ ನೀಡಿದ್ದರು.
ಆದರೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಸಕರ ವಿರುದ್ಧ ಘೋಷಣೆ ಕೂಗಿದರು. ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು ಅವರು ಯಾಕಾಗಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ವಿರೋಧ ವ್ಯಕ್ತಪಡಿಸಿದರು ಎಂದು ಪ್ರಶ್ನಿಸಿದರು. ಅದಕ್ಕೆ ಅಮರ್ಪಕ ಉತ್ತರ ನೀಡಿದ ಶಾಸಕರ ಮೇಲೆ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು. ಗಾಯಗೊಂಡ ಟಿಡಿಪಿ ಶಾಸಕ ರೆಡ್ಡಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.