ಹಿಂದಿ ಪಠ್ಯ ಪುಸ್ತಕ ತರಲಿಲ್ಲವೆಂಬ ಕಾರಣಕ್ಕೆ 3ನೇ ತರಗತಿಯ ಬಾಲಕಿಯೊಬ್ಬಳಿಗೆ ಹೊಡೆದು ಸಾಯಿಸಿದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕನನ್ನು ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಏಳು ವರ್ಷದ ಬಾಲಕಿ ಆಕಾಂಕ್ಷಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಶಿಕ್ಷಕ ಅಮರ್ ಸಿಂಗ್ ಗೌತಮ್ ಈಗ ಬಂಧಿತನಾಗಿದ್ದಾನೆ.
ಡಿಸೆಂಬರ್ 21ರಂದು ಈ ಪ್ರಕರಣ ನಡೆದಿತ್ತು. ಶಿಕ್ಷಕನ ಏಟಿನಿಂದಾಗಿ ಬಾಲಕಿಗೆ ಬಹುಶಃ ಆಂತರಿಕ ರಕ್ತಸ್ರಾವವಾಗಿರಬೇಕೆಂದು ಶಂಕಿಸಲಾಗಿದೆ. ಕುತ್ತಿಗೆಯಲ್ಲಿ ತೀವ್ರ ನೋವಾಗುತ್ತಿದೆ ಎಂದು ತಂದೆ ತಾಯಿಯ ಬಳಿ ಹೇಳಿದ್ದ ಆಕಾಂಕ್ಷಾ, ನಿಧಾನವಾಗಿ ವಿಷಯ ತಿಳಿಸಿದ್ದಳು. ಮರು ದಿನ ಅವಳ ಸ್ಥಿತಿ ಗಂಭೀರವಾಯಿತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಸೌಲಭ್ಯಗಳಿಲ್ಲದ ಕಾರಣ ವೈದ್ಯರು ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಕೂಡಲೇ ಸೇರಿಸುವಂತೆ ಸೂಚಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಬಾಲಕಿ ಕೊನೆಯುಸಿರೆಳೆದಳು. ಬಂಧಿತ ಗೌತಮ್ನನ್ನು ಶಿಕ್ಷಣ ಇಲಾಖೆಯು ಅಮಾನತುಗೊಳಿಸಿದೆ.