ಹೈದ್ರಾಬಾದ್ , ಶುಕ್ರವಾರ, 25 ಡಿಸೆಂಬರ್ 2009( 16:41 IST )
ತೆಲಂಗಾಣಾ ಪ್ರದೇಶದ 13 ಸಚಿವರು ಹಾಗೂ 60 ಮಂದಿ ಶಾಸಕರು ಸಾಮೂಹಿಕವಾಗಿ ತಮ್ಮ ರಾಜೀನಾಮೆ ಪತ್ರಗಳನ್ನು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ರವಾನಿಸಿದ್ದು, ತೆಲಂಗಾಣಾ ರಾಜ್ಯ ಘೋಷಣೆಗೆ ಸಮಯ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜೀನಾಮೆ ನೀಡಿದ ಸಚಿವರು ಹಾಗೂ ಶಾಸಕರು, ಸಚಿವಾಲಯದಲ್ಲಿ ಮುಖ್ಯಮಂತ್ರಿ ಕೆ.ರೋಸಯ್ಯನವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ನಿರ್ದಾರದ ಬಗ್ಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತೆಲಂಗಾಣ ಶಾಸಕರಾದ ಪಿ.ಲಕ್ಷ್ಮಯ್ಯ,ಕೇಂದ್ರ ಸರಕಾರ ಪ್ರತ್ಯೇಕ ತೆಲಂಗಾಣ ರಾಜ್ಯ ಘೋಷಣೆಗೆ ಸ್ಪಷ್ಟ ಸಮಯ ನಿಗದಿಪಡಿಸಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಡಿಸೆಂಬರ್ 23 ರಂದು ತೆಲಂಗಾಣ ಪ್ರತ್ಯೇಕ ರಾಜ್ಯದ ಘೋಷಣೆಯನ್ನು ಹಿಂಪಡೆದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.