ಕಳೆದ ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿಯವರ ಕಚೇರಿ ಮತ್ತು ಸರಕಾರಿ ಕಚೇರಿಗಳ ಇತರ ಕಂಪ್ಯೂಟರುಗಳಿಂದ ರಕ್ಷಣಾ ಮಾಹಿತಿ ಕಳವು ಮಾಡಲೆತ್ನಿಸಿದ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದ್ದು, ಇದರ ಹಿಂದೆ ಚೀನಾ ಕೈವಾಡವಿದೆ ಎಂದು ಭಾರತ ಆರೋಪಿಸಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರು ಬ್ರಿಟೀಷ್ ಪತ್ರಿಕೆಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ, ತನ್ನ ಕಚೇರಿಗಳ ಮೇಲೆ ಇಂಟರ್ನೆಟ್ ದಾಳಿ ನಡೆಸಿರುವ ಚೀನೀ ಮೂಲದ ವ್ಯಕ್ತಿಗಳು ಮಾಹಿತಿ ಕಳವಿಗೆ ಯತ್ನಿಸಿದ್ದಾರೆ ಎಂದಿದ್ದಾರೆ.
ಅಮೆರಿಕಾದ ರಕ್ಷಣಾ ಇಲಾಖೆ, ಹಣಕಾಸು ಇಲಾಖೆ ಹಾಗೂ ಗೂಗಲ್ ಸೇರಿದಂತೆ ಹಲವು ಟೆಕ್ನಾಲಜಿ ಕಂಪನಿಗಳ ಮೇಲೆ ಚೀನಾದಿಂದ ಸೈಬರ್ ದಾಳಿಗಳು ನಡೆದ ದಿನ ಡಿಸೆಂಬರ್ 15ರಂದೇ ತನ್ನ ಕಚೇರಿ ಮತ್ತು ಸರಕಾರಿ ಕಚೇರಿಗಳ ಮೇಲೂ ದಾಳಿ ನಡೆದಿದೆ ಎಂದು ನಾರಾಯಣನ್ ಹೇಳಿದ್ದಾರೆ.
ನಮ್ಮ ಕಂಪ್ಯೂಟರುಗಳಿಂದ ಮಾಹಿತಿಗಳನ್ನು ಕಳ್ಳತನ ಮಾಡಲು ಯತ್ನಿಸಿದ ಉದಾಹರಣೆ ಇದೇ ಮೊದಲಲ್ಲ ಎಂದು 'ದ ಟೈಮ್ಸ್' ಪತ್ರಿಕೆಗೆ ಹೇಳಿರುವ ಅವರು, ದಾಳಿಕೋರರು ಪಿಡಿಎಫ್ ಅಟ್ಯಾಚ್ಮೆಂಟ್ ಹೊಂದಿರುವ ಇ-ಮೇಲ್ನಲ್ಲಿ ಟ್ರಾಜನ್ ವೈರಸ್ ಹರಿಯಬಿಟ್ಟಿದ್ದಾರೆ ಎಂದು ಬಹಿರಂಗಪಡಿಸಿದರು.
ಈ ವೈರಸ್ ಮೂಲಕ ದಾಳಿಕೋರರಿಗೆ ದಾಳಿಗೊಳಗಾದ ಕಂಪ್ಯೂಟರಿನಿಂದ ಮಾಹಿತಿಗಳನ್ನು ಡೌನ್ಲೋಡ್ ಅಥವಾ ಡಿಲೀಟ್ ಮಾಡಬಹುದಾಗಿತ್ತು. ಆದರೆ ಇದನ್ನು ಪತ್ತೆ ಹಚ್ಚಲಾಗಿದ್ದು, ಅದನ್ನು ನಾಶಪಡಿಸುವವರೆಗೆ ಇ-ಮೇಲ್ ತೆರೆಯದಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ನಾರಾಯಣನ್ ತಿಳಿಸಿದ್ದಾರೆ.
ಇದು ಚೀನಾದ್ದೇ ಕೃತ್ಯವೆಂಬುದು ಸಾಮಾನ್ಯರ ಅಭಿಪ್ರಾಯ. ಇದರ ನಿರ್ದಿಷ್ಟ ಮೂಲ ಯಾವುದೆಂದು ಹೇಳಲು ನಮಗೂ ಕಷ್ಟ. ಆದರೆ ಪ್ರಮುಖ ಶಂಕೆ ನಮ್ಮದು. ಅಲ್ಲದೆ ಇದು ವ್ಯವಸ್ಥಿತ ದಾಳಿಯೆಂಬುದು ಸ್ಪಷ್ಟ. ಸೈಬರ್ ದಾಳಿಗಳಿಂದ ರಕ್ಷಣೆಗೊಳಗಾಗಲು ಅಮೆರಿಕಾ ಮತ್ತು ಬ್ರಿಟನ್ ಜತೆ ಭಾರತವು ನಿರಂತರ ಸಂಪರ್ಕದಲ್ಲಿದೆ ಎಂದರು.
ಆದರೆ ಚೀನಾ ಸರಕಾರ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಚೀನಾ ಕಾನೂನಿನ ಪ್ರಕಾರ ಕಂಪ್ಯೂಟರ್ ಹ್ಯಾಕಿಂಗ್ ನಿಷಿದ್ಧ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿಕೆ ನೀಡಿದ್ದಾರೆ.