ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ಮೇಲೆ ತನಗೆ ನಿಯಂತ್ರಣವಿಲ್ಲ ಎಂದು ಪಾಕಿಸ್ತಾನ ಒಪ್ಪಿಕೊಂಡಿರುವುದರಿಂದ ಅವುಗಳನ್ನು ಭಾರತವೇ ನಾಶ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಗ್ರಹಿಸಿದೆ.
ಮಂಗಳವಾರ ಭುವನೇಶ್ವರದಲ್ಲಿ ಮಾತನಾಡುತ್ತಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್, ತನ್ನ ದೇಶದಲ್ಲಿನ ಉಗ್ರರ ಮೇಲೆ ತನಗೆ ನಿಯಂತ್ರಣವಿಲ್ಲ, ತಾನು ಹೇಳಿದಂತೆ ಅವರು ಕೇಳುತ್ತಿಲ್ಲ ಎಂಬುದನ್ನು ಪಾಕಿಸ್ತಾನದ ನಾಯಕತ್ವ ಒಪ್ಪಿಕೊಂಡ ಮೇಲೆ ಭಯೋತ್ಪಾದಕರ ಶಿಬಿರಗಳನ್ನು ಧ್ವಂಸ ಮಾಡುವ ಜವಾಬ್ದಾರಿಯನ್ನು ಭಾರತವೇ ತೆಗೆದುಕೊಳ್ಳಬಹುದು ಎಂದರು.
ಭಾರತದ ಮೇಲೆ ಮತ್ತೆ ಭಯೋತ್ಪಾದನಾ ದಾಳಿ ನಡೆಯದು ಎಂದು ಭರವಸೆ ನೀಡಲಾರೆ ಎಂದು ಇತ್ತೀಚೆಗಷ್ಟೇ ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಹೇಳಿದ್ದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಭಾಗ್ವತ್, ಇಂತಹ ಉದ್ಧಟತನ ತೋರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿಕೆ ನೀಡಿದ್ದರು.
ಕಾಶ್ಮೀರ ವಿವಾದದಲ್ಲಿ ಅಮೆರಿಕಾ ಮಧ್ಯಪ್ರವೇಶವನ್ನು ತೀವ್ರವಾಗಿ ಖಂಡಿಸಿದ ಅವರು, ಅಮೆರಿಕಾ ತನ್ನ ಹಿತಾಸಕ್ತಿಗಳಿಗೆ ಬದ್ಧವಾಗಿದೆಯೇ ಹೊರತು, ಭಾರತಕ್ಕಲ್ಲ ಎಂದರು.
ಯುಪಿಎ ಸರಕಾರ ಮತ್ತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅಲ್ಪಸಂಖ್ಯಾತರನ್ನು ತುಷ್ಟೀಕರಣಗೊಳಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಆರೆಸ್ಸೆಸ್ ಮುಖ್ಯಸ್ಥ, ಅವರಿಗೆ ಮೀಸಲಾತಿ ನೀಡುವ ನೀತಿಯನ್ನು ಬೆಂಬಲಿಸುವ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಅದೇ ಹೊತ್ತಿಗೆ ಧಾರ್ಮಿಕ ಮತಾಂತರದ ಕುರಿತು ಕಿಡಿ ಕಾರಿರುವ ಭಾಗ್ವತ್, ಯಾವುದೇ ಹಸ್ತಕ್ಷೇಪವಿಲ್ಲದೆ ಜನತೆಯನ್ನು ತಮ್ಮ ಸ್ವಂತ ಧರ್ಮ ಮತ್ತು ಸಂಸ್ಕೃತಿಯನ್ನು ಅನುಸರಿಸುವಂತೆ ಅವಕಾಶ ಮಾಡಿಕೊಡಬೇಕು. ಎಲ್ಲಾ ಧರ್ಮದ ಜನರನ್ನೂ ಸಮಾನವಾಗಿ ಕಾಣಬೇಕು ಎಂದರು.