ಮುಸ್ಲಿಂ ಮೀಸಲಾತಿ ಸೂಕ್ತವಲ್ಲ; ಆಂಧ್ರಕ್ಕೆ ಹೈಕೋರ್ಟ್ ಆದೇಶ
ಹೈದರಾಬಾದ್, ಸೋಮವಾರ, 8 ಫೆಬ್ರವರಿ 2010( 12:36 IST )
ಮುಸ್ಲಿಮರಿಗೆ ಶೇ.4ರ ಮೀಸಲಾತಿ ಪ್ರಕಟಿಸಿದ್ದ ರಾಜ್ಯ ಸರಕಾರದ ಆದೇಶವನ್ನು ರದ್ದುಗೊಳಿಸಿರುವ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ, ಧರ್ಮವನ್ನು ಆಧರಿಸಿ ಮೀಸಲಾತಿ ನೀಡುವುದು ಬೇಡ ಎಂದು ಆದೇಶ ನೀಡಿದೆ.
ಸರಕಾರಿ ಉದ್ಯೋಗ ಮತ್ತು ಶಾಲಾ-ಕಾಲೇಜುಗಳಲ್ಲಿ ಶೇ.4ರ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಬೇಕೆನ್ನುವುದು ಅಸಮರ್ಥನೀಯ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
2007ರ ಜುಲೈ 23ರಂದು ವೈ.ಎಸ್. ರಾಜಶೇಖರ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರಕಾರವು 15 ಹಿಂದುಳಿದ ಸಮುದಾಯಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ನೀಡುವ ನಿರ್ಧಾರಕ್ಕೆ ಬಂದಿತ್ತು.
ಸರಕಾರವು ನಿರ್ಧರಿಸಿರುವ ಧರ್ಮವನ್ನು ಆಧರಿಸಿದ ಮೀಸಲಾತಿ ಸೂಕ್ತವಲ್ಲ ಎಂದು ಸೋಮವಾರ ತೀರ್ಪು ನೀಡಿರುವ ನ್ಯಾಯಾಲಯ, ಇದು ಜಾರಿಗೊಳ್ಳಲು ಸಾಧ್ಯವಿಲ್ಲ ಎಂದು ಸರಕಾರದ ಆದೇಶವನ್ನು ರದ್ದು ಮಾಡಿದೆ.
ಮುಸ್ಲಿಂ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕಾಯ್ದೆ-2007ರ ಆಂಧ್ರಪ್ರದೇಶ ಮೀಸಲಾತಿಯನ್ನು ಪ್ರಶ್ನಿಸಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹೈಕೋರ್ಟ್ನಲ್ಲಿ ದಾಖಲಾಗಿದ್ದವು.
2007ರಲ್ಲಿ ಐದು ಮಂದಿ ನ್ಯಾಯಮೂರ್ತಿಗಳ ಪೀಠವು ವಿಚಾರಣೆ ಆರಂಭಿಸಿತ್ತು. ಬಳಿಕ ಪ್ರಕರಣವನ್ನು 2008ರ ಜನವರಿಯಲ್ಲಿ ಏಳು ನ್ಯಾಯಾಧೀಶರನ್ನೊಳಗೊಂಡ ಪೀಠಕ್ಕೆ ವರ್ಗಾಯಿಸಲಾಗಿತ್ತು.
ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಕೂಡ ಪ್ರತ್ಯೇಕ ತೆಲಂಗಾಣ ರಾಜ್ಯದಲ್ಲಿನ ಮುಸ್ಲಿಮರಿಗೆ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಶೇ.4ರ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು.
ಮುಸ್ಲಿಮರಿಗೆ ಮೀಸಲಾತಿ ದೊರೆಯದ ಹೊರತು ಅವರಿಗೆ ಸಾಮಾಜಿಕ ನ್ಯಾಯ ದೊರೆತಂತಾಗುವುದಿಲ್ಲ ಎಂದು ರಾವ್ ಈ ಹಿಂದೆ ತಿಳಿಸಿದ್ದರು.