ಪ್ರತ್ಯೇಕ ರಾಜ್ಯ ಬೇಡಿಕೆ ಕುರಿತಂತೆ ತೆಲಂಗಾಣದ 12 ಶಾಸಕರ ರಾಜೀನಾಮೆಯನ್ನು ಆಂಧ್ರಪ್ರದೇಶ ವಿಧಾನಸಭೆ ಸ್ಪೀಕರ್ ಸ್ವೀಕರಿಸಿದ ಬೆನ್ನಿಗೆ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಸುಮಾರು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ತೆಲಂಗಾಣ ಪ್ರತ್ಯೇಕ ರಾಜ್ಯ ಬೇಡಿಕೆ ಕುರಿತು ಕೇಂದ್ರ ಸರಕಾರ ನೇಮಿಸಿರುವ ಶ್ರೀಕೃಷ್ಣ ಸಮಿತಿಯ ನೀತಿ ನಿಬಂಧನೆಗಳನ್ನು ವಿರೋಧಿಸಿರುವ ಈ ಪ್ರಾಂತ್ಯದ 119 ಶಾಸಕರ ಪೈಕಿ 15 ಮಂದಿ ಭಾನುವಾರ ರಾಜೀನಾಮೆ ಸಲ್ಲಿಸಿದ್ದರು. ಆದರೆ ತೆಲಂಗಾಣ ರಾಷ್ಟ್ರ ಸಮಿತಿಯ 10, ಬಿಜೆಪಿ ಮತ್ತು ಟಿಡಿಪಿ ತಲಾ ಒಂದೊಂದು ಶಾಸಕರ ರಾಜೀನಾಮೆಯನ್ನು ಮಾತ್ರ ಸ್ಪೀಕರ್ ಸ್ವೀಕರಿಸಿದ್ದಾರೆ.
ಒಸ್ಮಾನಿಯಾ ಯುನಿವರ್ಸಿಟಿಯಲ್ಲಿನ ತೆಲಂಗಾಣ ಪರ ವಿದ್ಯಾರ್ಥಿಗಳು ಭಾನುವಾರ ಸಂಜೆಯ ಹೊತ್ತಿಗೆ ಎರಡನೇ ಬಾರಿಗೆ ಹಿಂಸಾಚಾರ ಆರಂಭಿಸಿದ್ದು, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದೆ. ಈ ಸಂದರ್ಭದಲ್ಲಿ ಲಾಠಿಚಾರ್ಜ್ ನಡೆಸಲಾಗಿದೆ.
ವಿದ್ಯಾರ್ಥಿಗಳು ಬೀದಿಬೀದಿಗಳಲ್ಲಿ ರ್ಯಾಲಿ ಆರಂಭಿಸಿದ ಬಳಿಕ ಯುನಿವರ್ಸಿಟಿ ಕ್ಯಾಂಪಸ್ಸಿನಲ್ಲಿದ್ದ ಪೊಲೀಸರು ಮತ್ತು ಅರೆಸೇನಾ ಪಡೆಯ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಮತ್ತೆ ಲಾಠಿಚಾರ್ಜ್ ನಡೆಸಲಾಯಿತು. ಅಲ್ಲದೆ ರಬ್ಬರ್ ಗುಂಡುಗಳನ್ನು ಹಾರಿಸಲಾಯಿತು ಎಂದು ಮೂಲಗಳು ಹೇಳಿವೆ.
ಕಲ್ಲು ತೂರಾಟ ನಡೆಸಿದ್ದರಿಂದ ಹಲವು ಪೊಲೀಸರು ಮತ್ತು ಮಾಧ್ಯಮಗಳ ಪ್ರತಿನಿಧಿಗಳು ಕೂಡ ಗಾಯಗೊಂಡಿದ್ದಾರೆ. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಬ್ಬರ್ ಗುಂಡು, ಆಶ್ರುವಾಯು ಸಿಡಿತ ಹಾಗೂ ಲಾಠಿಚಾರ್ಜ್ನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೆಲಂಗಾಣ ಪ್ರಾಂತ್ಯದ 15 ಶಾಸಕರು ರಾಜೀನಾಮೆ ನೀಡಿದ ನಂತರ ಅವರನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲು ಯತ್ನಿಸಿದಾಗ ಹಿಂಸಾಚಾರ ಹುಟ್ಟಿಕೊಂಡಿತ್ತು. ಕೇಂದ್ರ ಸರಕಾರ ನೇಮಿಸಿರುವ ಶ್ರೀಕೃಷ್ಣ ಸಮಿತಿಗೆ ವಿಧಿಸಲಾಗಿರುವ ನಿಬಂಧನೆಗಳೇ ಸರಿಯಿಲ್ಲ ಎಂದು ತೆಲಂಗಾಣ ಪ್ರಾಂತ್ಯದ ರಾಜಕೀಯ ಪಕ್ಷಗಳು ಹೇಳಿದ್ದು, ಸಮಿತಿಯನ್ನು ವಿರೋಧಿಸಿವೆ.