ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ದಾಳಿ ತನಿಖೆ ಕುರಿತು ಪಾಕ್ ಜತೆ ಪ್ರಶ್ನೆ: ಭಾರತ
(India | Pakistan | 2008 Mumbai terror attacks | P Chidambaram)
ಮುಂಬರುವ ಪಾಕಿಸ್ತಾನದ ಜತೆಗಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಸಂದರ್ಭದಲ್ಲಿ 2008ರ ನವೆಂಬರ್ ಮುಂಬೈ ದಾಳಿಯ ಕುರಿತ ಉತ್ತರ ಲಭಿಸದ ಪ್ರಶ್ನೆಗಳನ್ನು ಭಾರತ ಎತ್ತಲಿದೆ ಎಂದು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಶುಕ್ರವಾರ ತಿಳಿಸಿದ್ದಾರೆ.
ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಸಂದರ್ಭದಲ್ಲಿ ಮುಂಬೈ ಭಯೋತ್ಪಾದನಾ ದಾಳಿಗಳ ಇತ್ಯರ್ಥವಾಗದೇ ಉಳಿದಿರುವ ತನಿಖೆಯ ವಿಚಾರಗಳನ್ನು ಇತರ ವಿಚಾರಗಳೊಂದಿಗೆ ಭಾರತವು ಪ್ರಶ್ನಿಸಲಿದೆ ಎಂದು ಗೃಹ ಸಚಿವಾಲಯವು ಹೇಳಲು ಬಯಸುತ್ತದೆ. ಈ ಮಾತುಕತೆಯಲ್ಲಿ ಯಾವೆಲ್ಲ ವಿಚಾರಗಳನ್ನು ಪ್ರಸ್ತಾಪಿಸಬೇಕು ಎಂಬುದರ ಕುರಿತು ಸರಕಾರ ಈಗಲೂ ಚರ್ಚೆ ನಡೆಸುತ್ತಿದ್ದು, ಪಟ್ಟಿ ಸಿದ್ಧ ಮಾಡುತ್ತಿದೆ ಎಂದರು.
2008ರ ನವೆಂಬರ್ 26ರಂದು ಮುಂಬೈ ಮೇಲೆ ಭಯೋತ್ಪಾದನಾ ದಾಳಿಗಳು ನಡೆದ ನಂತರ ಪಾಕಿಸ್ತಾನದ ಜತೆಗಿನ ಸಮಗ್ರ ಮಾತುಕತೆಯನ್ನು ಭಾರತ ಅಮಾನತುಗೊಳಿಸಿತ್ತು. ಆ ಬಳಿಕ ಯಾವುದೇ ಅಧಿಕೃತ ಮಾತುಕತೆಗಳು ಉಭಯ ದೇಶಗಳ ನಡುವೆ ನಡೆದಿಲ್ಲ. ಆದರೆ ಇದೀಗ ಭಾರತವು ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ಮುಂದಾಗಿದ್ದು, ಫೆಬ್ರವರಿ 25ರಂದು ನವದೆಹಲಿಯಲ್ಲಿ ಇದು ನಡೆಯಲಿದೆ.
160 ಅಮಾಯಕರ ಸಾವಿಗೆ ಕಾರಣವಾದ ಈ ದಾಳಿ ಮೂರು ದಿನಗಳ ಕಾಲ ಮುಂದುವರಿದಿತ್ತು. ಇದರ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿವೆ ಎಂದು ಭಾರತ ಆರೋಪಿಸುತ್ತಾ ಬಂದಿದೆ. ಈ ಸಂಬಂಧ ಸಾಕಷ್ಟು ಸಾಕ್ಷ್ಯಗಳನ್ನು ತಾನು ಹಸ್ತಾಂತರಿಸಿರುವುದಾಗಿಯೂ ಭಾರತ ತಿಳಿಸಿದೆ.
ಮುಂದಿನ ಮಾತುಕತೆಯಲ್ಲಿ ಭಯೋತ್ಪಾದನೆಯ ವಿರುದ್ಧದ ಪಾಕಿಸ್ತಾನದ ಕ್ರಮವೇ ಪ್ರಮುಖ ಅಂಶ ಎಂದು ಹೇಳುತ್ತಾ ಬಂದಿರುವ ಭಾರತ, ಪೂರಕ ಕ್ರಮಗಳನ್ನು ನೀಡಿದ್ದ ಪಾಕಿಸ್ತಾನ ಭರವಸೆಗಳನ್ನು ಈಡೇರಿಸದ ಹೊರತು ಅದರ ಜತೆ ಸಮಗ್ರ ಮಾತುಕತೆಯಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ.
ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಗೃಹಸಚಿವರುಗಳ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸುವ ಸಂಕೇತವನ್ನೂ ಚಿದಂಬರಂ ನೀಡಿದ್ದಾರೆ. ಈಗಿನ ಪ್ರಕಾರ ಸಭೆಯಲ್ಲಿ ಪಾಲ್ಗೊಳ್ಳುವ ನಿಲುವು ಭಾರತದ್ದು ಎಂದಿದ್ದಾರೆ.