ಕಳೆದ 15 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ವ್ಯಕ್ತಿ ಮತ್ತು ಆತನ 35ರ ಹರೆಯದ ಸಂಗಾತಿಯನ್ನು ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ಅಮಾನುಷ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಅಚ್ಚರಿಯೆಂದರೆ ಈ ಕೃತ್ಯ ನಡೆಸಿದವರು ಬಲಿಪಶುವಿನ ಮಗ ಮತ್ತು ಸಹೋದರ ಎನ್ನುವುದು.
ಮಹಾರಾಷ್ಟ್ರದ ಬೀಡ್ ಎಂಬಲ್ಲಿನ ಎಕುರ್ಕಾ ಗ್ರಾಮದಲ್ಲಿ ಮಾರ್ಚ್ 8ರಂದು ರಾತ್ರಿ ಈ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ಮಹಿಳೆ ಮತ್ತು ಆಕೆಯ ಸಂಗಾತಿ ಮನೆಯಲ್ಲಿ ರಾತ್ರಿ ಹೊತ್ತು ಮಲಗಿದ್ದ ಸಂದರ್ಭದಲ್ಲಿ, ವ್ಯಕ್ತಿಯ ಮಗ ಮತ್ತು ಸಹೋದರರನ್ನೊಳಗೊಂಡ ಗುಂಪೊಂದು ದಾಳಿ ಮಾಡಿತ್ತು. ಇಬ್ಬರಿಗೂ ಕೋಲಿನಿಂದ ತೀವ್ರವಾಗಿ ಥಳಿಸಿದ್ದಲ್ಲದೆ, ಮಹಿಳೆಯ ಗುಪ್ತಾಂಗಗಳಿಗೂ ಗಾಯ ಮಾಡಿದ್ದಾರೆ.
ಇಬ್ಬರು ಪ್ರಜ್ಞೆ ತಪ್ಪುವವರೆಗೆ ಗುಂಪು ಮನಸೋ ಇಚ್ಛೆ ಥಳಿಸಿದ್ದಲ್ಲದೆ ಗ್ರಾಮದ ಎಲ್ಲೆಡೆ ಬೆತ್ತಲೆ ಮೆರವಣಿಗೆ ಮಾಡಿತು. ನಂತರ ಥಳಿತಕ್ಕೊಳಗಾದ ಮಹಿಳೆಯ ಸಂಗಾತಿಗೆ ಪ್ರಜ್ಞೆ ಮರಳಿದ ನಂತರ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ರಕ್ಷಣೆ ಪಡೆದಿದ್ದಾರೆ.
ನಮಗೆ ಪೊಲೀಸರೇ ಬಟ್ಟೆಗಳನ್ನು ಕೊಟ್ಟರು. ಬಟ್ಟೆಗಳನ್ನು ತೊಟ್ಟ ಬಳಿಕ ನಾವು ಅವರ ಜೀಪಿನಲ್ಲೇ ಹೋದೆವು ಎಂದು ಬಲಿಪಶುಗಳು ವಿವರಣೆ ನೀಡಿದ್ದಾರೆ.
ಮಹಿಳೆಯ ಆಪ್ತರ ಪ್ರಕಾರ, ಆಕೆಯ ಸಂಗಾತಿಯ ಸಹೋದರನ ಬಯಕೆಯನ್ನು ಈಡೇರಿಸಲು ಮಹಿಳೆ ನಿರಾಕರಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲಾಗಿದೆ ಎಂದು ಹೇಳುತ್ತಾರೆ.
ಈ ನಡುವೆ ಪೊಲೀಸರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ. ನಿಧಾನವಾಗಿ ಕಾರ್ಯಾಚರಿಸುತ್ತಿದ್ದಾರೆ ಎಂದು ಕೆಲವು ಸಂಘಟನೆಗಳು ಆರೋಪಿಸಿವೆ.