ನದಿಗಳನ್ನು ಒಂದುಗೂಡಿಸುವ ವಿಚಾರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರೋಧಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ರಾಹುಲ್ ಗಾಂಧಿಯವರು ಮೂಲಭೂತ ವ್ಯವಸ್ಥೆಗಳ ಕುರಿತು ನನ್ನಷ್ಟು ಅನುಭವ ಹೊಂದಿಲ್ಲ, ಅವರಲ್ಲಿ ಅನುಭವದ ಕೊರತೆಯಿದೆ ಎಂದು ಹೇಳಿದ್ದಾರೆ. ಅದೇ ಹೊತ್ತಿಗೆ ಮಹಿಳಾ ಮೀಸಲಾತಿ ಮಸೂದೆ ಕುರಿತು ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿಗೆ ಭೇಟಿ ನೀಡಿದ್ದ ಗಡ್ಕರಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ರಾಹುಲ್ ಗಾಂಧಿ ಹೇಳಿರುವುದರ ಕುರಿತು ನಾನೇನು ಕಳವಳಗೊಂಡಿಲ್ಲ. ಈ ಯೋಜನೆಗೆ ಸಂಬಂಧಪಟ್ಟಂತೆ ನಾನು ಅವರ ಹೇಳಿಕೆಯನ್ನು ಗಂಭೀರವಾಗಿಯೂ ಪರಿಗಣಿಸಿಲ್ಲ. ಯಾಕೆಂದರೆ ಅವರಿಗೆ ಮೂಲಭೂತ ವ್ಯವಸ್ಥೆಗಳ ಕುರಿತು ಅನುಭವವಿಲ್ಲ. ಈ ವಿಚಾರದಲ್ಲಿ ನಾನು ಸಾಕಷ್ಟು ತಿಳಿದುಕೊಂಡಿರುವುದರಿಂದ ಕನಿಷ್ಠ ಇದರಲ್ಲಿ ನಾನು ಅನುಭವಿ ಎಂದರು.
ವಿದ್ಯುತ್ ಕಡಿತ ಮತ್ತು ನೀರಿನ ಕೊರತೆಯಿಂದ ದೇಶದ ಹಲವು ಭಾಗಗಳಲ್ಲಿ ರೈತರ ಆತ್ಮಹತ್ಯೆಗಳು ನಡೆಯುತ್ತಿವೆ ಎಂದಿರುವ ಗಡ್ಕರಿ, ಇದಕ್ಕಿರುವ ಏಕೈಕ ಪರಿಹಾರವೆಂದರೆ ನದಿಗಳ ಪರಸ್ಪರ ಸಂಪರ್ಕ. ಇದರ ಅಂಗವಾಗಿ ಗಂಗಾ ಮತ್ತು ಕಾವೇರಿ ನದಿಗಳನ್ನು ಜೋಡಿಸುವ ಮೂಲಕ ಮೊದಲ ಹೆಜ್ಜೆ ಇಡಬೇಕು ಎಂದಿದ್ದಾರೆ.
ಹೀಗೆ ನದಿಗಳ ಪರಸ್ಪರ ಜೋಡಣೆಯಿಂದ ರಾಜ್ಯಗಳಿಗೆ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ 4,000 ಟಿಎಂಸಿ ನೀರನ್ನು ಪೂರೈಸಲು ಸಾಧ್ಯವಾಗುತ್ತದೆ.
ಗೋಪಿನಾಥ್ ಒಳಮೀಸಲಾತಿ ಬಯಸಿಲ್ಲ... ರಾಜ್ಯಸಭೆಯಲ್ಲಿ ಸಹಕಾರ ನೀಡಿರುವಂತೆ ಲೋಕಸಭೆಯಲ್ಲೂ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಬಿಜೆಪಿ ಸಂಪೂರ್ಣ ಸಹಕಾರ ನೀಡಲಿದೆ ಎಂದಿರುವ ಗಡ್ಕರಿ, ಹಿರಿಯ ಮುಖಂಡ ಗೋಪಿನಾಥ ಮುಂಡೆ ಒಬಿಸಿ ಮಹಿಳೆಯರಿಗೆ ಒಳ ಮೀಸಲಾತಿ ನೀಡಬೇಕೆಂದು ಕೇಳಿಲ್ಲ ಎಂದಿದ್ದಾರೆ.
ಮುಂಡೆಯವರು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಳ ಮೀಸಲಾತಿ ಬೇಕೆಂದು ಬೇಡಿಕೆ ಮುಂದಿಟ್ಟಿಲ್ಲ. ಅವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಬೇಕೆಂದು ಮಾತ್ರ ಕೇಳಿದ್ದಾರೆ ಎಂದು ಗಡ್ಕರಿ ತಿಳಿಸಿದರು.
ಮುಂಡೆಯವರ ಜತೆ ನಾನು ಮಾತುಕತೆ ನಡೆಸಿದ್ದೇನೆ. ಅವರ ನಿಲುವು ಸ್ಪಷ್ಟವಾಗಿದೆ. ಅವರು ಮಹಿಳಾ ಮೀಸಲಾತಿಯಲ್ಲಿ ಒಳ ಮೀಸಲಾತಿ ಕೇಳಿಲ್ಲ. ಒಬಿಸಿಗೆ ಮೀಸಲಾತಿ ಬೇಕೆಂದು ಕೇಳಿದ್ದಾರೆ ಎಂದು ಗಡ್ಕರಿ ವಿವರಣೆ ನೀಡಿದ್ದಾರೆ.