ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೌರವ ಹತ್ಯೆಗೆ ಬೆಂಬಲ ವಿಸ್ತರಿಸಿದ ಖಾಪ್ ಪಂಚಾಯತ್ಗಳು
(Khap panchayats | Kurukshetra | Hindu Marriage Law | Haryana)
ಕುರುಕ್ಷೇತ್ರ, ಮಂಗಳವಾರ, 13 ಏಪ್ರಿಲ್ 2010( 20:12 IST )
ಗೌರವ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯದಲ್ಲಿ ಸಾಬೀತುಗೊಂಡಿರುವ ಆರು ಮಂದಿಗೆ ಹರ್ಯಾಣ ಮತ್ತು ಪಕ್ಕದ ಇತರ ರಾಜ್ಯಗಳ 'ಖಾಪ್' ಪಂಚಾಯಿತಿಗಳ ಪ್ರಧಾನ ಸಮಿತಿಗಳು ಸಹಕಾರವನ್ನು ವಿಸ್ತರಿಸಲು ನಿರ್ಧರಿಸಿವೆ.
ಅದೇ ಹೊತ್ತಿಗೆ ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಗೋತ್ರದಲ್ಲಿ ಮದುವೆಯಾಗುವುದನ್ನು ನಿಷೇಧಿಸಬೇಕು ಎಂದೂ ಖಾಪ್ ಮಹಾ ಪಂಚಾಯಿತಿಗಳು ಆಗ್ರಹಿಸಿವೆ.
ಸಗೋತ್ರದ ಮನೋಜ್ ಮತ್ತು ಬಬ್ಳಿ ವಿವಾಹವಾಗಿರುವುದನ್ನು ವಿರೋಧಿಸಿದ್ದ ಖಾಪ್ ಪಂಚಾಯತ್, ಅವರಿಬ್ಬರನ್ನೂ ಕೊಂದು ಹಾಕಿತ್ತು. ಈ ಸಂಬಂಧ ಐದು ಮಂದಿಗೆ ಮರಣದಂಡನೆ ಹಾಗೂ ಒಬ್ಬನಿಗೆ ಜೀವಾವಧಿ ಶಿಕ್ಷೆಯನ್ನು ಇತ್ತೀಚೆಗಷ್ಟೇ ಕರ್ನಲ್ ನ್ಯಾಯಾಲಯವು ಘೋಷಿಸಿತ್ತು.
ಈ ಸಂಬಂಧ ರಾಜಸ್ತಾನ, ಹರ್ಯಾಣ ಮತ್ತು ಪಂಜಾಬ್ಗಳಲ್ಲಿನ ಖಾಪ್ ಪಂಚಾಯಿತಿಗಳ 200ಕ್ಕೂ ಹೆಚ್ಚು ಮಂದಿ ಹರ್ಯಾಣದ ಕುರುಕ್ಷೇತ್ರದಲ್ಲಿ ಮಂಗಳವಾರ ಸಭೆ ಸೇರಿದ್ದು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸದೇ ಇರಲು ನಿರ್ಧರಿಸಿದರು.
ಸಗೋತ್ರಗಳಲ್ಲಿ ನಡೆಯುವ ಮದುವೆಗಳನ್ನು ಸರಕಾರ ಅಕ್ರಮ ಎಂದು ಘೋಷಿಸಬೇಕು. ಅದಕ್ಕಾಗಿ ಹಿಂದೂ ವಿವಾಹ ಕಾಯ್ದೆಯಲ್ಲಿ ತಿದ್ದುಪಡಿ ತರಬೇಕೆಂಬ ನಿಲುವಿಗೂ ಸಭೆ ಬಂದಿದೆ.
ಅಲ್ಲದೆ ತಪ್ಪಿತಸ್ಥರು ಎಂದು ಸಾಬೀತಾಗಿ ಶಿಕ್ಷೆ ಎದುರಿಸುತ್ತಿರುವ ವ್ಯಕ್ತಿಗಳ ಕುಟುಂಬಸ್ಥರಿಗೆ ನೆರವಾಗಲು ಎಲ್ಲಾ ಗ್ರಾಮಗಳ ಪ್ರತಿ ಮನೆಯಿಂದ ತಲಾ 10 ರೂಪಾಯಿಗಳಂತೆ ಸಂಗ್ರಹಿಸುವಂತೆ ಖಾಪ್ ಪಂಚಾಯತ್ಗಳಿಗೆ ಸಭೆ ನಿರ್ದೇಶನ ನೀಡಿದೆ. ಈ ಹಣವನ್ನು ಆಪಾದಿತರ ವಿರುದ್ಧ ನೀಡಲಾಗಿರುವ ತೀರ್ಪನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲು ಕೂಡ ಬಳಸಲಾಗುತ್ತದೆ ಎಂದು ಸಭೆ ತಿಳಿಸಿದೆ.