ಮೋದಿಯ ಕ್ಷಮೆ ಕೇಳದಿದ್ದರೆ 'ಕೊಚ್ಚಿ' ಕೊಲೆ: ತರೂರ್ಗೆ ಬೆದರಿಕೆ
ನವದೆಹಲಿ, ಗುರುವಾರ, 15 ಏಪ್ರಿಲ್ 2010( 10:51 IST )
ಕೊಚ್ಚಿ ಐಪಿಎಲ್ ಸಂಬಂಧಿಸಿ ಕೇಂದ್ರ ಸಚಿವರು ಹಾಗೂ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ನಡುವಣ ವಿವಾದವು ಮತ್ತೊಂದು ಮಗ್ಗುಲಿಗೆ ಹೊರಳಿದ್ದು, ಮೋದಿಯ ಕ್ಷಮೆ ಯಾಚಿಸದಿದ್ದರೆ ಕೊಲೆ ಮಾಡುವುದಾಗಿ ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಬಂಟ ಛೋಟಾ ಶಕೀಲ್ ಹೆಸರಿನಲ್ಲಿ ಶಶಿ ತರೂರ್ ಅವರಿಗೆ ಎಸ್ಎಂಎಸ್ ಬೆದರಿಕೆ ಬಂದಿದೆ.
ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವರು ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವುದರಿಂದ ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಐಪಿಎಲ್ ಆಯುಕ್ತ ಲಲಿತ್ ಮೋದಿ ಅವರು ಟ್ವಿಟ್ಟರ್ ಸಂದೇಶದಲ್ಲಿ ಕೊಚ್ಚಿ ಐಪಿಎಲ್ ತಂಡಕ್ಕೆ ಸಂಬಂಧಿಸಿ, ತರೂರ್ ಅವರ ಆಪ್ತರಾಗಿರುವ ಸುನಂದಾ ಪುಷ್ಕರ್ ಎಂಬವರಿಗೆ 70 ಕೋಟಿ ರೂ.ಗಳ ಈಕ್ವಿಟಿಯನ್ನು ಉಡುಗೊರೆ ನೀಡಲಾಗಿತ್ತು ಎಂದು ಬಹಿರಂಗಪಡಿಸಿದ್ದರು. ಕೊಚ್ಚಿ ತಂಡವು ಕಳೆದ ತಿಂಗಳು ನಡೆದ ಹರಾಜಿನಲ್ಲಿ 1530 ಕೋಟಿ ರೂಪಾಯಿಗೆ ಮಾರಾಟವಾಗಿತ್ತು.
ಆನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯಸ್ಥ ಶಶಾಂಕ ಮನೋಹರ್ ಅವರಿಗೆ ಬರೆದ ಇ-ಪತ್ರದಲ್ಲಿ ಮೋದಿ ಅವರು, ತರೂರ್ ಅವರೇ ತನಗೆ ಕರೆ ಮಾಡಿ, ಕೊಚ್ಚಿ ಐಪಿಎಲ್ ಫ್ರಾಂಚೈಸಿಯ ಒಡೆಯರ ಹೆಸರು ಬಹಿರಂಗಪಡಿಸದಂತೆ ಕೇಳಿಕೊಂಡಿದ್ದರು ಎಂದೂ ಹೇಳಿದ್ದರು.
ಮೋದಿ ಅವರು ಇತರ ಒಡೆಯರ ಹೆಸರುಗಳನ್ನೂ ಟ್ವಿಟ್ಟರ್ನಲ್ಲಿ ಬಯಲಾಗಿಸಿದ್ದರು. ಆದರೆ ಮೋದಿ ಅವರ ಮೇಲೆ ಯಾವುದೇ ಒತ್ತಡ ಹೇರಿಲ್ಲ, ಕೊಚ್ಚಿ ತಂಡದಲ್ಲಿ ತನಗೆ ಯಾವುದೇ ಪಾಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.