ಪಾಕ್ಗೆ ಮತ್ತಷ್ಟು ಸಾಕ್ಷಾಧಾರ ನೀಡುವ ಅಗತ್ಯವಿಲ್ಲ:ಪ್ರಧಾನಿ
ವಾಷಿಂಗ್ಟನ್, ಗುರುವಾರ, 15 ಏಪ್ರಿಲ್ 2010( 09:43 IST )
ಮುಂಬೈ ದಾಳಿಯಲ್ಲಿ ಲಷ್ಕರ್ ಉಗ್ರರ ಪಾತ್ರವಿದೆ ಎನ್ನುವುದಕ್ಕೆ ಮತ್ತಷ್ಟು ಸಾಕ್ಷಾಧಾರಗಳನ್ನು ಒದಗಿಸುವಂತೆ ಪಾಕ್ ನೀಡಿದ ಹೇಳಿಕೆಯನ್ನು ಟೀಕಿಸಿದ ಪ್ರಧಾನಿ ಮನಮೋಹನ್ ಸಿಂಗ್, ಪಾಕಿಸ್ತಾನಕ್ಕೆ ಮತ್ತಷ್ಟು ಸಾಕ್ಷಾಧಾರಗಳನ್ನು ಒದಗಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಅಣುಸಮ್ಮೇಳನದಲ್ಲಿ ಭಾಗವಹಿಸಿದ ಪ್ರಧಾನಿ ಮನಮೋಹನ್ ಸಿಂಗ್,ಪಾಕ್ ಪ್ರಧಾನಿ ಯುಸೂಫ್ ರಝಾ ಗಿಲಾನಿಯವರೊಂದಿಗೆ ಎರಡು ಬಾರಿ ಚರ್ಚಿಸಿದ್ದು,ಮುಂಬೈ ದಾಳಿಯಲ್ಲಿ ಭಾಗಿಯಾದ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಲ್ಲಿ ಮಾತ್ರ ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಸಮಸ್ಯೆಗಳಲ್ಲಿ ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳು ಮಧ್ಯಸ್ಥಿಕೆ ವಹಿಸುವುದನ್ನು ಭಾರತ ಸಹಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಲಷ್ಕರ್ ನಾಯಕ ಸಯ್ಯದ್ ಸೇರಿದಂತೆ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಾಕ್ ಬಳಿ ಸಾಕಷ್ಟು ಸಾಕ್ಷಾಧಾರಗಳಿಲ್ಲ ಎನ್ನುವ ಗಿಲಾನಿ ಹೇಳಿಕೆಗೆ ಉತ್ತರಿಸಿದ ಪ್ರಧಾನಿ, ಪಾಕಿಸ್ತಾನಕ್ಕೆ ಮತ್ತಷ್ಟು ಸಾಕ್ಷಾಧಾರಗಳನ್ನು ನೀಡುವ ಅಗತ್ಯವಿದೆ ಎಂದು ನಾನು ಭಾವಿಸಿಲ್ಲ ಎಂದು ತಿಳಿಸಿದ್ದಾರೆ.