ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಶ್ಚಿಮ ಬಂಗಾಲದಲ್ಲಿ ನಕ್ಸಲರೇ ಇಲ್ಲ ಅಂತಾರೆ ಮಮತಾ ಬ್ಯಾನರ್ಜಿ
(Maoists | West Bengal | Mamata Banerjee | Trinamool Congress)
ಪಶ್ಚಿಮ ಬಂಗಾಲದಲ್ಲಿ ನಕ್ಸಲರೇ ಇಲ್ಲ ಅಂತಾರೆ ಮಮತಾ ಬ್ಯಾನರ್ಜಿ
ಕೊಲ್ಕತ್ತಾ, ಶುಕ್ರವಾರ, 16 ಏಪ್ರಿಲ್ 2010( 15:27 IST )
ಪಶ್ಚಿಮ ಬಂಗಾಲದಲ್ಲಿ ಮಾವೋವಾದಿಗಳೇ ಇಲ್ಲ ಎಂಬ ಈ ಅಚ್ಚರಿಯ ಹೇಳಿಕೆಯನ್ನು ನೀಡಿರುವುದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ. ಅವರ ಪ್ರಕಾರ ರಾಜ್ಯದಲ್ಲಿರುವುದು ನಕ್ಸಲರಲ್ಲ, ಅವರು ಎಡಪಕ್ಷಗಳ ಬಂಡುಕೋರರು.
ಎಡರಂಗದ ಬಂಡುಕೋರರ ರೆಕ್ಕೆಗಳನ್ನು ಕತ್ತರಿಸಲು ಜಂಟಿ ಕಾರ್ಯಾಚರಣೆಗಳನ್ನು ರಾಜ್ಯದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳು ಜನರ ವಿರುದ್ಧವೋ ಅಥವಾ ಭಾರತೀಯ ಮಾರ್ಕಿಸ್ಟ್ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರಿಗೆ ರಾಜ್ಯದ ಆಡಳಿತವನ್ನು ನೀಡುವ ಉದ್ದೇಶದಿಂದ ನಡೆಸಲಾಗುತ್ತಿದೆಯೋ ಎಂಬುದನ್ನು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರಲ್ಲಿ ತಾನು ಪ್ರಶ್ನಿಸಲಿರುವುದಾಗಿ ಆಕೆ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಜಂಟಿ ಕಾರ್ಯಾಚರಣೆಗಳ ಹೆಸರಿನಲ್ಲಿ ಸಿಪಿಐ (ಮಾರ್ಕಿಸ್ಟ್) ಪಡೆಗಳಿಗೆ ಈ ಪ್ರಾಂತ್ಯದಲ್ಲಿ ಶಿಬಿರಗಳನ್ನು ತೆರೆಯಲು ಯಾಕೆ ಅವಕಾಶ ನೀಡಲಾಗಿದೆ? ನನ್ನ ಪ್ರಕಾರ ಜಂಟಿ ಕಾರ್ಯಾಚರಣೆಯೇ ತಪ್ಪು. ಇಲ್ಲಿನ ಭದ್ರತಾ ಪಡೆಗಳನ್ನು ತಕ್ಷಣವೇ ಹಿಂದಕ್ಕೆ ಪಡೆದುಕೊಳ್ಳಬೇಕು. ಸರಕಾರಗಳಿಂದ ನಡೆಸಲ್ಪಡುವ ಕಾರ್ಯಾಚರಣೆಯಲ್ಲಿ ಸಿಪಿಐಎಂ ಏಕೆ ಒಂದು ಭಾಗವಾಗಿದೆ ಎಂಬುದೇ ನನಗೆ ತಿಳಿಯುತ್ತಿಲ್ಲ ಎಂದು ಪರೋಕ್ಷವಾಗಿ ನಕ್ಸಲರಿಗೆ ಬೆಂಬಲ ನೀಡುತ್ತಾ ಬಂದಿರುವ ಬ್ಯಾನರ್ಜಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಮಾವೋವಾದಿಗಳೇ ಇಲ್ಲ. ಈ ಪ್ರಾಂತ್ಯವು ಸಂಪೂರ್ಣವಾಗಿ ಸುಮಾರು 200 ಶಿಬಿರಗಳನ್ನು ತೆರೆದಿರುವ ಸಿಪಿಐಎಂನ ಶಸ್ತ್ರಸಜ್ಜಿತ ಕಾರ್ಯಕರ್ತರ ನಿಯಂತ್ರಣದಲ್ಲಿದೆ ಎಂದು ಜಂಗಲಮಹಲ್ ಎಂಬಲ್ಲಿ ಮಾತನಾಡುತ್ತಿದ್ದ ಬ್ಯಾನರ್ಜಿ ತಿಳಿಸಿದ್ದಾರೆ.
ಅದೇ ಹೊತ್ತಿಗೆ ಅವರು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಸಂವಿಧಾನದ ಅಡಿಯಲ್ಲಿ ಅವರು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು, ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಅನುಸರಿಸುತ್ತಿದ್ದಾರೆ. ಸಾಮೂಹಿಕ ಹತ್ಯೆ, ಇತರ ರಾಜಕೀಯ ಪ್ರೇರಿತ ಹತ್ಯೆಗಳು ಸೇರಿದಂತೆ ಹಲವು ಅಪರಾಧಿ ಕೃತ್ಯಗಳಲ್ಲಿ ತೊಡಗಿಸಿ ಕೊಂಡಿರುವ ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.
ಅರಣ್ಯ ಪ್ರದೇಶಗಳಲ್ಲಿ ಅಡಗಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿರುವ ಮಾವೋವಾದಿಗಳನ್ನು ಮಟ್ಟ ಹಾಕಲು ರಾಜ್ಯ ಪೊಲೀಸ್ ಮತ್ತು ಕೇಂದ್ರ ಅರೆ ಸೇನಾಪಡೆಗಳು 'ಆಪರೇಷನ್ ಗ್ರೀನ್ ಹಂಟ್' ಜಂಟಿ ಕಾರ್ಯಾಚರಣೆಯನ್ನು ನಡೆಸುತ್ತಿವೆ.