ಚಿಕಿತ್ಸೆಗಾಗಿ ಶುಕ್ರವಾರ ರಾತ್ರಿ ಮಲೇಷಿಯಾದಿಂದ ಚೆನ್ನೈಗೆ ಆಗಮಿಸಿದ್ದ ಎಲ್ಟಿಟಿಇ ಮುಖ್ಯಸ್ಥ ವಿ. ಪ್ರಭಾಕರನ್ ತಾಯಿ ಪಾರ್ವತಿಯವರನ್ನು ಕೇಂದ್ರ ಸರಕಾರದ ಆದೇಶದಂತೆ ತಕ್ಷಣವೇ ಭಾರತದಿಂದ ಮಲೇಷಿಯಾಕ್ಕೆ ಗಡೀಪಾರು ಮಾಡಲಾಗಿದೆ.
ಹತ್ಯೆಗೀಡಾದ ತಮಿಳು ಸಂಘಟನೆಯ ಮುಖ್ಯಸ್ಥನ ತಾಯಿ ಪಾರ್ವತಿಯವರು ಚೆನ್ನೈಯಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಲೆಂದು ಕೌಲಾಲಂಪುರದಿಂದ ವಿಮಾನದಲ್ಲಿ ಬಂದಿದ್ದರು. ಆದರೆ ಅವರನ್ನು ವಿಮಾನದಿಂದ ಕೆಳಗಿಳಿಯಲೂ ಅವಕಾಶ ನೀಡದ ಅಧಿಕಾರಿಗಳು, ಮರಳಿ ಮಲೇಷಿಯಾಕ್ಕೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಟಿಟಿಇ ಬೆಂಬಲಿಗರೆಂದೇ ಗುರುತಿಸಿಕೊಂಡಿರುವ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಮತ್ತು ತಮಿಳು ರಾಷ್ಟ್ರೀಯತಾ ಚಳುವಳಿ ನಾಯಕ ಪಿ. ನೆಡುಮಾರನ್ ಸೇರಿದಂತೆ ಸುಮಾರು 150ರಷ್ಟು ಮಂದಿ ವಿಮಾನ ನಿಲ್ದಾಣದಲ್ಲಿ ಸೇರಿದ್ದ ಕಾರಣ ಸ್ವತಃ ಚೆನ್ನೈ ಪೊಲೀಸ್ ಆಯುಕ್ತ ಜಂಗೀದ್ ಅವರು ಭದ್ರತಾ ವ್ಯವಸ್ಥೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.
ದೇಶದ ಉತ್ತರ ಭಾಗದಲ್ಲಿ ಸೇನೆ ಮುನ್ನುಗ್ಗುತ್ತಿದ್ದ ಸಂದರ್ಭದಲ್ಲಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದ ಪ್ರಭಾಕರನ್ ಹತ್ಯೆಯಾಗಿದ್ದಾನೆ ಎಂದು 2009ರ ಮೇ 18ರಂದು ಶ್ರೀಲಂಕಾ ಸರಕಾರ ಘೋಷಿಸಿತ್ತು.
ಆತನ ಹೆತ್ತವರು ನಿರಾಶ್ರಿತ ಶಿಬಿರದಲ್ಲಿದ್ದಾರೆಂದು ನಂತರ ಸರಕಾರ ತಿಳಿಸಿತ್ತು. ಪ್ರಭಾಕರನ್ ತಂದೆ ತಿರುವೆಕ್ಕಾಡಂ ವೇಲುಪಿಳ್ಳೈ ಇದೇ ವರ್ಷದ ಜನವರಿ ತಿಂಗಳಲ್ಲಿ ನಿಧನರಾಗಿದ್ದರು.