ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ದೂರವಾಣಿ ಕದ್ದಾಲಿಕೆ ಪ್ರಕರಣದ ಕುರಿತಂತೆ ಕಿಡಿಕಾರಿರುವ ಎಡಪಕ್ಷಗಳು, ಇದು ಕಾನೂನಿನ ಉಲ್ಲಂಘನೆಯಾಗಿದ್ದು, ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳನ್ನೇ ಕಸಿಯುವ ಯತ್ನ ಇದಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಕೇಂದ್ರದ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪ್ರಮುಖ ನಾಯಕರ ದೂರವಾಣಿ ಕದ್ದಾಲಿಸಿದೆ ಎಂಬ ಮಾಧ್ಯಮವೊಂದರ ವರದಿ ಕುರಿತಂತೆ ಹರಿಹಾಯ್ದಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಇದು ಅಕ್ರಮ, ಅಸಹನೀಯ ಹಾಗೂ ನಾಚಿಕೆಗೇಡಿನ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ತನ್ನ ಅಧೀನದ ಬೇಹುಗಾರಿಕಾ ಸಂಸ್ಥೆಗಳನ್ನು ಬಳಸಿಕೊಳ್ಳುವ ಮೂಲಕ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಈ ಆರೋಪದ ಹೊಣೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜಕೀಯ ನಾಯಕರ ಮೇಲೆ ಕಣ್ಗಾವಲು ಇಡುವ ಬಗೆಗಿನ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ನಿಷೇಧಿಸಬೇಕು. ಬೇಹುಗಾರಿಕಾ ಸಂಸ್ಥೆಗಳ ನಡೆ ಸಂಸತ್ತಿನ ಗಮನಕ್ಕೆ ತರುವಂತಿರಬೇಕು ಎಂದು ಹೇಳಿದರು.