ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಾಯಿಗೆ ದ್ರೋಹ; ಮಕ್ಕಳಿಂದಲೇ ತಂದೆಯ ಪ್ರೇಯಸಿ ಹತ್ಯೆ! (dad's lover | Arun Sharma | Fulwabai Vishwakarma | Nagpur)
Bookmark and Share Feedback Print
 
ತಾಯಿಯ ಆರೋಗ್ಯ ಸರಿಯಿಲ್ಲ ಎಂಬ ಕಾರಣಕ್ಕೆ ಪರಸ್ತ್ರೀ ಸಂಗ ಮಾಡಿದ್ದ ತಂದೆಯನ್ನು ಬುದ್ಧಿಮಾತಿನಲ್ಲಿ ನಿಯಂತ್ರಿಸಲಾಗದ ಮಕ್ಕಳು ಕಂಡುಕೊಂಡ ಕೊನೆಯ ದಾರಿಯಿದು. ತಂದೆಯ ಪ್ರೇಯಸಿಯನ್ನು ಮುಗಿಸಿದ ನಂತರ ತಂದೆಗೂ ಗತಿ ಕಾಣಿಸಲು ಮಕ್ಕಳು ಮುಂದಾಗಿದ್ದರಾದರೂ, ಅಷ್ಟು ಹೊತ್ತಿಗೆ ಪರಾರಿಯಾಗುವ ಮೂಲಕ ಮಹಾನುಭಾವ ಪ್ರಾಣ ಉಳಿಸಿಕೊಂಡಿದ್ದಾನೆ.

ಇದು ನಡೆದಿರುವುದು ನಾಗ್ಪುರದಲ್ಲಿ. ಕೊಲೆಯಾದ 40ರ ಹರೆಯದ ಫುಲ್ವಾಬಾಯ್ ವಿಶ್ವಕರ್ಮ ಎಂಬ ಮಹಿಳೆಯೊಂದಿಗೆ ಅರುಣ್ ಶರ್ಮಾ ಅಕ್ರಮ ಸಂಬಂಧ ಹೊಂದಿದ್ದ. ಕಳೆದ ಏಳು ತಿಂಗಳಿಂದ ಈ ಶರ್ಮಾ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿ ಗೀತಾರಿಂದ ಬೇರೆಯಾಗಿ ವಿಶ್ವಕರ್ಮ ಜತೆ ವಾಸಿಸುತ್ತಿದ್ದ.

ಇದಕ್ಕಿದ್ದ ಕಾರಣ ಗೀತಾ ಅಸೌಖ್ಯಕ್ಕೆ ತುತ್ತಾಗಿರುವುದು. ಈ ಸಂದರ್ಭದಲ್ಲಿ ತನ್ನ ದೈಹಿಕ ವಾಂಛೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆಗಾಗ ಗೀತಾರನ್ನು ಗಂಡ ಶರ್ಮಾ ಪೀಡಿಸುತ್ತಿದ್ದ. ಆದರೆ ಗೀತಾ ದೈಹಿಕವಾಗಿ ಅಸಮರ್ಥಳಾಗಿದ್ದ ಕಾರಣ ಗಂಡನ ಬೇಡಿಕೆಯನ್ನು ಪೂರೈಸಲು ಒಪ್ಪಿಗೆ ಸೂಚಿಸಿರಲಿಲ್ಲ.

ಬಳಿಕ ಪತ್ನಿ ಗೀತಾಳ ಸಹೋದರನ ಹೆಂಡತಿ ವಿಶ್ವಕರ್ಮಳ ಜತೆ ನಾನು ದೈಹಿಕ ಸಂಪರ್ಕ ಬೆಳೆಸುತ್ತೇನೆ ಎಂದು ಹೇಳಿದ್ದ. ಇದಾಗ ಕೆಲವೇ ದಿನಗಳಲ್ಲಿ ಪತ್ನಿಯನ್ನು ತೊರೆದು ವಿಶ್ವಕರ್ಮಳ ಜತೆ ವಾಸಿಸಲು ಆರಂಭಿಸಿದ್ದ.

ಇದೇ ಸಂಬಂಧ ಮಕ್ಕಳಾದ ಆನಂದ್ ಮತ್ತು ಅರವಿಂದ್ ಹಲವು ಬಾರಿ ತಂದೆಯಲ್ಲಿ ಜಗಳ ಕಾದಿದ್ದರು. ಪತ್ನಿ ಗೀತಾಳ ಜತೆಗೂ ಶರ್ಮಾ ಎದುರು ಸಿಕ್ಕಾಗಲೆಲ್ಲ ಏನಾದರೂ ತಗಾದೆ ತೆಗೆದು ಗದ್ದಲ ಎಬ್ಬಿಸುತ್ತಿದ್ದರು. ಇದರಿಂದ ನೊಂದ ಇಬ್ಬರು ಮಕ್ಕಳು ತೆಗೆದುಕೊಂಡ ನಿರ್ಧಾರ ಮಾತ್ರ ಕ್ರೂರವಾಗಿತ್ತು.

ಇಲ್ಲಿ ಗ್ಯಾರೇಜ್ ಒಂದನ್ನು ನಡೆಸುತ್ತಿರುವ ಆನಂದ್ ಮತ್ತು ಅರವಿಂದ್ ಸ್ವತಃ ಚೂಪಾದ ಆಯುಧವೊಂದನ್ನು ಸಿದ್ಧಪಡಿಸಿದ್ದರು. ನಂತರ ತಂದೆ ಮತ್ತು ಆತನ ಪ್ರೇಯಸಿ ಜತೆಯಾಗಿರುವುದನ್ನು ಖಚಿತಪಡಿಸಿಕೊಂಡು ಮಹಿಳೆಯ ಬೆನ್ನಿಗೆ 20 ಬಾರಿ ಇರಿದಿದ್ದಾರೆ. ಅಷ್ಟರಲ್ಲಿ ತಂದೆ ಅಲ್ಲಿಂದ ಪರಾರಿಯಾಗಿದ್ದಾರೆ. ಅವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರ್ಮಾ ಚಿತಾವಣೆಯಿಂದಾಗಿ ಜಾರ್ಖಂಡ್‌ನ ಧಾನಾಬಾದ್‌ನಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳು ಮತ್ತು ಗಂಡನನ್ನು ತೊರೆದು ಶರ್ಮಾ ಜತೆ ಅಕ್ರಮವಾಗಿ ಜೀವನ ಸಾಗಿಸುತ್ತಿದ್ದ ವಿಶ್ವಕರ್ಮ ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾಳೆ.

ಹತ್ಯೆ ಮಾಡಿದ ಇಬ್ಬರು ಮಕ್ಕಳು ಮತ್ತು ಅಕ್ರಮ ಸಂಬಂಧ ಹೊಂದಿದ್ದ ತಂದೆಯನ್ನು ಇದೀಗ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ