ಬಲವಂತದಿಂದ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಆಕ್ರೋಶಿತ ಜನತೆಯ ಗುಂಪೊಂದು ಚರ್ಚೊಂದನ್ನು ಧ್ವಂಸಗೊಳಿಸಿದ್ದು, ಪಾದ್ರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ವರದಿಯಾಗಿದೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ. ಚರ್ಚ್ನಲ್ಲಿ ಇತರ ಧರ್ಮೀಯರನ್ನು ಸೆಳೆದು ಬಲವಂತದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎಂದು ಘೋಷಣೆಗಳನ್ನು ಕೂಗಿದ ಗುಂಪು ಗುರುವಾರ ರಾತ್ರಿ ದಾಳಿ ನಡೆಸಿದೆ.
ಲಕ್ನೋದಿಂದ 80 ಕಿಲೋ ಮೀಟರ್ ದೂರದಲ್ಲಿರುವ ಕಲ್ಯಾಣಪುರ ಎಂಬಲ್ಲಿನ ಚರ್ಚ್ ಮೇಲೆ ದಾಳಿ ನಡೆಸಲಾಗಿದ್ದು, ದಯಾಳು ಸುನಾ ಎಂಬ ಪಾದ್ರಿ ಗಾಯಗೊಂಡಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.
ಚರ್ಚ್ನಲ್ಲಿ ಬಲವಂತದ ಮತಾಂತರ ನಡೆಯುತ್ತಿರುವುದು ಹೌದಾಗಿದ್ದರೆ ಪಾದ್ರಿ ಮೇಲೆ ದಾಳಿ ನಡೆಸಿದವರು ಮೊದಲು ನಮಗೆ ಈ ಬಗ್ಗೆ ಮಾಹಿತಿ ನೀಡಬೇಕಿತ್ತು. ಆದರೂ ನಾವು ಇದೀಗ ಪಾದ್ರಿ ವಿರುದ್ಧ ಜನ ಮಾಡುತ್ತಿರುವ ಆರೋಪವನ್ನು ಪರಿಶೀಲನೆ ನಡೆಸುತ್ತಿದ್ದು, ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಎಂ. ಖಾಜಿ ತಿಳಿಸಿದ್ದಾರೆ.
ಮತ್ತಷ್ಟು ದಾಳಿ ಅಥವಾ ಅಹಿತಕರ ಘಟನೆಗಳು ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ಕಲ್ಯಾಣಪುರ ಪ್ರದೇಶದಲ್ಲಿ, ಅದರಲ್ಲೂ ಚರ್ಚ್ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಪೊಲೀಸರ ಪ್ರಕಾರ ದಾಳಿಗೊಳಗಾದ ಚರ್ಚ್ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಕಾನ್ಪುರದಲ್ಲಿನ ಐಐಟಿಯ ಶಿಕ್ಷಕರೊಬ್ಬರು ಮತ್ತು ಕೆಲವು ವಿದ್ಯಾರ್ಥಿಗಳ ಮೇಲೂ ದಾಳಿ ನಡೆಸಲು ಈ ಗುಂಪು ಯತ್ನಿಸಿದೆ. ಆದರೆ ಅವರನ್ನು ಪೊಲೀಸರು ರಕ್ಷಿಸಿದ್ದಾರೆ.