2002ರ ಗುಜರಾತ್ ಗಲಭೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳ (ಸಿಟ್) ವಿಚಾರಣೆಗೆ ಸೋಮವಾರ ಹಾಜರಾಗಿರುವ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಹೇಳಿರುವ ಮಾತಿದು.
ಇಂದು ಬೆಳಿಗ್ಗೆ 11 ಗಂಟೆ ಹೊತ್ತಿಗೆ 'ಜೈ ಶ್ರೀರಾಮ್' ಎಂದು ಘೋಷಣೆ ಹಾಕುತ್ತಿದ್ದ ನೂರಾರು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಾರ್ಯಕರ್ತರೊಂದಿಗೆ ಗುಜರಾತ್ ರಾಜಧಾನಿ ಗಾಂಧಿನಗರದ ಸಿಟ್ ಕಚೇರಿಗೆ ತೊಗಾಡಿಯಾ ಆಗಮಿಸಿದರು.
PTI
ವಿಎಚ್ಪಿ ನಾಯಕ ವಿಚಾರಣೆಗಾಗಿ ಕಚೇರಿಯ ಒಳಗೆ ಹೋಗುತ್ತಿದ್ದಂತೆ, ಅವರ ಬೆಂಬಲಿಗರು ಮತ್ತು ಕೆಲವು ಸಾಧುಗಳು ಕಚೇರಿಯ ಹೊರಗಡೆ ಕುಳಿತು ಭಜನೆಗಳನ್ನು ಹಾಡಿದರು.
ಸಿಟ್ ಕಚೇರಿಗೆ ಬರುವ ಮೊದಲು ತೊಗಾಡಿಯಾ ಅಹಮದಾಬಾದ್ನಲ್ಲಿನ ಮಹಾಲಕ್ಷ್ಮಿ ದೇವಸ್ಥಾನ ಮತ್ತು ಗಾಂಧಿನಗರದ ಪಂಚದೇವ್ ದೇವಳಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದಿದ್ದರು.
2002ರ ಫೆಬ್ರವರಿ 28ರಂದು ಗುಲ್ಬರ್ಗ್ ಸೊಸೈಟಿ ಹಿಂಸಾಚಾರದಲ್ಲಿ 69 ಮಂದಿ ಸಾವನ್ನಪ್ಪಿದ್ದರು. ಇವರಲ್ಲಿ ಮಾಜಿ ಸಂಸದ ಎಹ್ಸಾನ್ ಜಾಫ್ರಿಯೂ ಸೇರಿದ್ದರು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಝಾಕಿಯಾ ಜಾಫ್ರಿ ನೀಡಿರುವ ದೂರಿನ ಆಧಾರದಲ್ಲಿ ಏಪ್ರಿಲ್ 19ರಂದು ವಿಚಾರಣೆಗೆ ಹಾಜರಾಗುವಂತೆ ಸಿಟ್ ತೊಗಾಡಿಯಾ ಅವರಿಗೆ ನೊಟೀಸ್ ಜಾರಿ ಮಾಡಿತ್ತು.
ಆದರೆ ವಿಎಚ್ಪಿ ನಾಯಕ ಸಂಘಟನೆಯ ಪ್ರವಾಸದಲ್ಲಿದ್ದುದರಿಂದ ವಿಚಾರಣೆಗೆ ಹಾಜರಾಗಿರಲಿಲ್ಲ.
ಯಾವ ದೂರು ಎಂಬ ಕುರಿತು ನನಗೇನೂ ಮಾಹಿತಿಯಿಲ್ಲ. ನಾನು ಈ ಸಂಬಂಧ ಸಾಕಷ್ಟು ಮನವಿಗಳನ್ನು ಮಾಡಿಕೊಂಡಿರುವ ಹೊರತಾಗಿಯೂ ದೂರಿನ ಪ್ರತಿಯನ್ನು ನನಗೆ ನೀಡಿಲ್ಲ ಎಂದು ಸಿಟ್ ಕಚೇರಿಗೆ ತೆರಳುವ ಮೊದಲು ವಿಎಚ್ಪಿ ಪ್ರಧಾನ ಕಚೇರಿಯಲ್ಲಿ ತೊಗಾಡಿಯಾ ಪತ್ರಕರ್ತರಿಗೆ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಸಿಟ್ ತನಿಖಾ ದಳವನ್ನು ಅಸ್ತಿತ್ವಕ್ಕೆ ತಂದಿದ್ದು, ದೂರಿನ ಕುರಿತು ತನಿಖೆ ನಡೆಸುವಂತೆ ಸೂಚಿಸಿದೆ. ಹಾಗಾಗಿ ಅಪೆಕ್ಸ್ ಕೋರ್ಟನ್ನು ಗೌರವಿಸುತ್ತಿರುವ ನಾನು ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದರು.
ಈ ದೇಶದಲ್ಲಿ ಒಬ್ಬ ಹಿಂದೂ ಆಗಿ ಇರುವುದೇ ಒಂದು ಅಪರಾಧ ಎಂದೂ ಅವರು ಒಟ್ಟಾರೆ ವ್ಯವಸ್ಥೆಯನ್ನು ವಿಶ್ಲೇಷಿಸಿದ ತೊಗಾಡಿಯಾ, ಸಂಸತ್ ದಾಳಿಯಲ್ಲಿ ದೋಷಿ ಎಂದು ಸಾಬೀತಾಗಿ ಮರಣದಂಡನೆಗೆ ಕಾಯುತ್ತಿರುವ ಭಯೋತ್ಪಾದಕ ಅಫ್ಜಲ್ ಗುರು ಪ್ರಕರಣದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.