ಮುಂಬೈ ದಾಳಿಕೋರರು ಮತ್ತು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹೊರತು ಪಾಕಿಸ್ತಾನದ ಜತೆ ಸಮಗ್ರ ಮಾತುಕತೆ ಇಲ್ಲ ಎಂದೇ ಮಂತ್ರದ ಮೂಲಕ ಮಾವಿನ ಕಾಯಿ ಉದುರಿಸಲು ಯತ್ನಿಸುತ್ತಿದ್ದ ಭಾರತ ಇದೀಗ ಪಾಕ್ ಜತೆ ಮತ್ತೊಂದು ಸುತ್ತಿನ ಮಾತುಕತೆಯನ್ನು ಖಚಿತಪಡಿಸಿದೆ.
ಜುಲೈ 15ರಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿಯವರೊಂದಿಗೆ ಅಧಿಕೃತ ಮಾತುಕತೆ ನಡೆಸಲು ಇಸ್ಲಾಮಾಬಾದ್ಗೆ ತೆರಳಲಿದ್ದಾರೆ. ಇದರೊಂದಿಗೆ ಭಾರತವು ತನ್ನ ಬಿಗು ನಿಲುವನ್ನು ನಿಧಾನವಾಗಿ ಸಡಿಲಿಸುತ್ತಿರುವುದು ಸ್ಪಷ್ಟವಾಗಿದೆ.
ಪಾಕ್ ವಿದೇಶಾಂಗ ಸಚಿವರು ಮುಂದಿನ ತಿಂಗಳು ಪಾಕಿಸ್ತಾನಕ್ಕೆ ಬರುವಂತೆ ನನಗೆ ಆಹ್ವಾನ ನೀಡಿದ್ದಾರೆ ಎಂದು ಖುರೇಷಿ ಜತೆ 30 ನಿಮಿಷಗಳ ದೂರವಾಣಿ ಮಾತುಕತೆ ನಡೆಸಿದ ನಂತರ ಕೃಷ್ಣ ಪತ್ರಕರ್ತರಿಗೆ ತಿಳಿಸಿದ್ದಾರೆ.
ಇಬ್ಬರು ವಿದೇಶಾಂಗ ಸಚಿವರುಗಳ ನಡುವಿನ ದೂರವಾಣಿ ಮಾತುಕತೆ ಸುಮಾರು ಅರ್ಧಗಂಟೆಗಳ ಕಾಲ ನಡೆಯಿತು. ಅಂತಿಮವಾಗಿ ಜುಲೈ 15ರಂದು ಕೃಷ್ಣ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಕಜಕಿಸ್ತಾನಕ್ಕೆ ಮೂರು ದಿನಗಳ ಪ್ರವಾಸಕ್ಕೆ ತೆರಳುವ ಮೊದಲು ಕೃಷ್ಣ ಪಾಕ್ ವಿದೇಶಾಂಗ ಸಚಿವರ ಜತೆ ಫೋನ್ ಮಾತುಕತೆ ನಡೆಸಿದ್ದಾರೆ.
ಏಪ್ರಿಲ್ 29ರಂದು ಭೂತಾನ್ನಲ್ಲಿ ನಡೆದಿದ್ದ ಉಭಯ ದೇಶಗಳ ಪ್ರಧಾನ ಮಂತ್ರಿಗಳ ನಡುವಿನ ಮಾತುಕತೆ ಸಂದರ್ಭದಲ್ಲಿ ಎರಡೂ ದೇಶಗಳ ನಡುವಿನ ವಿಶ್ವಾಸ ವೃದ್ಧಿ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರಕ್ಕೆ ಬರಲಾಗಿತ್ತು. ಅದೇ ನಿಟ್ಟಿನಲ್ಲಿ ವಿದೇಶಾಂಗ ಸಚಿವರುಗಳ ನಡುವಿನ ಮಾತುಕತೆ ಬೆಳವಣಿಗೆಗಳು ನಡೆದಿವೆ.