ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರತ್ಯೇಕ ತೆಲಂಗಾಣವೊಂದೇ ಪರಿಹಾರ: ಸಮಿತಿಗೆ ಟಿಡಿಪಿ
(Separate Telangana state | TDP | Sri Krishna committee | Andhra Pradesh)
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯೊಂದೇ ಪ್ರಸಕ್ತ ನಮ್ಮ ಮುಂದಿರುವ ಸಮಸ್ಯೆಗೆ ಪರಿಹಾರ ಎಂದು ಈ ಪ್ರಾಂತ್ಯದ ತೆಲುಗು ದೇಶಂ ಪಕ್ಷದ ನಾಯಕರು ಶ್ರೀ ಕೃಷ್ಣ ಆಯೋಗಕ್ಕೆ ತಿಳಿಸಿದ್ದಾರೆ.
ತೆಲಂಗಾಣಕ್ಕೆ ಪ್ರಕಟಿಸಲಾಗಿರುವ ಸುರಕ್ಷತೆಯನ್ನು ರಕ್ಷಿಸಲಾಗಿಲ್ಲ. ಈ ಪ್ರಾಂತ್ಯದ ಜನತೆಗೆ ಉದ್ಯೋಗದಲ್ಲಿ ನೀಡಬೇಕಾದ ಪ್ರಾಶಸ್ತ್ಯದ ಕುರಿತು ಮಾಡಿಕೊಳ್ಳಲಾಗಿದ್ದ ಸಂಭಾವಿತರ ಒಪ್ಪಂದದ ಆರು ಅಂಶಗಳ ಸೂತ್ರಗಳು ಇತಿಹಾಸ ಸೇರಿವೆ. ಯಾವ ಸೂತ್ರವೂ ಇಲ್ಲಿ ಕೆಲಸ ಮಾಡದು. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯೊಂದೇ ಇದಕ್ಕಿರುವ ಪರಿಹಾರ ಎಂದು ಟಿಡಿಪಿ ಹಿರಿಯ ನಾಯಕ ಎನ್. ಜನಾರ್ದನ ರೆಡ್ಡಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ರೆಡ್ಡಿ ಮತ್ತು ಸಿಬಿಐ ಮಾಜಿ ನಿರ್ದೇಶಕ ಜಿ. ವಿಜಯರಾಮ ರಾವ್ ಸೇರಿದಂತೆ ತೆಲಂಗಾಣ ಪ್ರಾಂತ್ಯದ ಹಿರಿಯ ಟಿಡಿಪಿ ನಾಯಕರು ಪ್ರತ್ಯೇಕ ತೆಲಂಗಾಣ ರಚನೆಯ ಅಗತ್ಯದ ಬಗ್ಗೆ ಕೇಂದ್ರ ಸರಕಾರ ನೇಮಿಸಿರುವ ಶ್ರೀ ಕೃಷ್ಣ ಸಮಿತಿಗೆ ಪವರ್-ಪಾಯಿಂಟ್ ಪ್ರೆಸೆಂಟೇಷನ್ ಸಿದ್ಧಪಡಿಸಿ ಹಸ್ತಾಂತರಿಸಿದೆ.
ಅದೇ ಹೊತ್ತಿಗೆ ತೆಲಂಗಾಣೇತರ ಪ್ರಾಂತ್ಯದ ಟಿಡಿಪಿ ನಾಯಕರು ಅಖಂಡ ಆಂಧ್ರಪ್ರದೇಶಕ್ಕಾಗಿ ಸಮಿತಿಯನ್ನು ಒತ್ತಾಯಿಸಿದ್ದಾರೆ.
ಅಖಂಡ ಆಂಧ್ರಪ್ರದೇಶಕ್ಕಾಗಿ ಹೋರಾಡುತ್ತಿರುವ 'ಸಮೈಕ್ಯಾಂಧ್ರ' ಜಂಟಿ ಕ್ರಿಯಾ ಸಮಿತಿಯು ಕೂಡ ತನ್ನ ನಿಲುವನ್ನು ಶ್ರೀ ಕೃಷ್ಣ ಸಮಿತಿಯ ಮುಂದೆ ಸ್ಪಷ್ಟಪಡಿಸಿದೆ.
ರಾಜ್ಯವನ್ನು ಅಖಂಡವಾಗಿಯೇ ಉಳಿಸಬೇಕು ಎಂದು ನಾವು ಸಮಿತಿಗೆ ತಿಳಿಸಿದ್ದೇವೆ. ಇಡೀ ರಾಜ್ಯದ ಮೂರು ಪ್ರಾಂತ್ಯಗಳ ಸಮಗ್ರ ಪ್ರಗತಿಗಾಗಿ ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದು ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಜೆ. ಸ್ಯಾಮ್ವೆಲ್ ತಿಳಿಸಿದ್ದಾರೆ.
ಎನ್.ಟಿ. ರಾಮ ರಾವ್ ಪತ್ನಿ ಎನ್ಟಿಆರ್ ತೆಲುಗು ದೇಶಂ ನಾಯಕಿ ಎನ್. ಲಕ್ಷ್ಮಿ ಪಾರ್ವತಿ, ಜಮಾತ್ ಉಲೇಮಾ ಹಿಂದ್ ಮತ್ತು ತೆಲಂಗಾಣ ಪ್ರಾಂತ್ಯದ ಕೆಲವು ಸಂಘಟನೆಗಳು ಕೂಡ ತಮ್ಮ ಅಭಿಪ್ರಾಯಗಳನ್ನು ಸಮಿತಿ ಮುಂದೆ ನಿನ್ನೆ ತಿಳಿಸಿವೆ.