ಬಜಪೆ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದ ದುರಂತದಲ್ಲಿ 158 ಮಂದಿ ಸಾವಿಗೀಡಾಗಿದ್ದು, 8 ಮಂದಿ ಅದರಿಂದ ಹಾರಿ ಪಾರಾಗಿದ್ದಾರೆ. ಆದರೆ, ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನಕ್ಕೆ ಟಿಕೆಟ್ ಕಾದಿರಿಸಿ, ಕೊನೆ ಕ್ಷಣದಲ್ಲಿ ಅದನ್ನು ಏರದ 9 ಮಂದಿ ಅದೃಷ್ಟಶಾಲಿಗಳು ಕೂಡ ಇದ್ದರು.
ಏರ್ ಇಂಡಿಯಾ ಬೋಯಿಂಗ್ 737-800 ವಿಮಾನವು ದುಬೈ ನಿಲ್ದಾಣದಿಂದ ಮುಂಜಾವ 3.15ಕ್ಕೆ ಹೊರಟು ಬೆಳಿಗ್ಗೆ 6.30ಕ್ಕೆ ಮಂಗಳೂರು ಬಳಿ ದುರಂತಕ್ಕೀಡಾಗಿತ್ತು.
ಏರ್ ಇಂಡಿಯಾ ಒದಗಿಸಿರುವ ಪ್ರಯಾಣಿಕರ ಪಟ್ಟಿಯಲ್ಲಿ 'ನೋ ಶೋ' (ಅಂದರೆ ಪ್ರಯಾಣ ತಪ್ಪಿಸಿಕೊಂಡವರು) ಎಂಬ ಪಟ್ಟಿಯಲ್ಲಿ 9 ಮಂದಿಯ ಹೆಸರಿದೆ. ಅವರೆಂದರೆ, ಮೆರ್ವಿನ್ ಡಿಸೋಜ, ವಸಂತ ಶೆಟ್ಟಿ, ತ್ರೇಸಿಯಮ್ಮ ಫಿಲಿಪ್, ಮೊಹಮದ್ ಅಶ್ಫಾಕ್, ಹುಸ್ನಾ ಫರ್ಹೀನ್, ಸಂಜೀವ ಬಾಬಣ್ಣ ಹೆಗ್ಡೆ, ಲೂಯಿಸ್ ಕಾರ್ಲೋ ವಿನ್ಸೆಂಟ್ ಗೆರಾರೋ, ಸ್ಟೀವನ್ ರೇಗೋ ಮತ್ತು ಕುಞ್ಞಿಕಣ್ಣನ್ ಚಂದು.