ಶನಿವಾರ ಮಧ್ಯರಾತ್ರಿಯ ಸಮಯದಲ್ಲಿ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಮಹಿಳೆಯೊಬ್ಬಳು, ಅಟೋ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಆಘಾತಕಾರಿ ಘಟನೆ ವರದಿಯಾಗಿದೆ.
ಘಟನೆಯಲ್ಲಿ ಮೃತರಾದವರು , ಅಟೋ ಚಾಲಕ ಉತ್ತಮ ನಗರ ನಿವಾಸಿಯಾದ ರಾಜ್ಕುಮಾರ್ ಮತ್ತು ಪಾಲಂ ಪ್ರದೇಶದ ನಿವಾಸಿ ವೇದ್ ಪ್ರಕಾಶ್ ಎಂದು ಗುರುತಿಸಲಾಗಿದೆ.
ಅಟೋದಲ್ಲಿ ಪ್ರಯಾಣಿಸುತ್ತಿದ್ದ ಜೀತ್ ಸಿಂಗ್ ಮತ್ತು ಮೆಘ್ ಸಿಂಗ್ ಅವರಿಗೆ ಗಾಯಗಳಾಗಿದ್ದು, ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಕಾರು ಚಾಲಕಿ ನಿವೇದಿತಾ ಸಿಂಗ್ ಎನ್ನುವವಳನ್ನು ಬಂಧಿಸಿದ್ದು, ಆರೋಪಿಯ ವಿರುದ್ಧ ಐಪಿಸಿ 304(ಎ) ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅದಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಕಂಟೋನ್ಮಂಟ್ ಪ್ರದೇಶದಲ್ಲಿರುವ ಗೋಪಿನಾಥ್ ಬಜಾರ್ ಪ್ರದೇಶದಲ್ಲಿ ಶನಿವಾರ ರಾತ್ರಿ 11.30ಕ್ಕೆ ಅಪಘಾತದ ಘಟನೆ ಸಂಭವಿಸಿದೆ.
ಅಟೋ ಚಾಲಕ ರಾಜ್ಕುಮಾರ್, ಕುಟುಂಬದಲ್ಲಿ ಸಂಪಾದನೆ ಮಾಡುವ ಏಕೈಕ ವ್ಯಕ್ತಿಯಾಗಿದ್ದು, ತಂದೆ ತಾಯಿ ಮತ್ತು ಐದು ಮಕ್ಕಳನ್ನು ಹೊಂದಿದ್ದಾರೆ.
ಆರೋಪಿ ನಿವೇದಿತಾ ಕಾರು ಚಾಲನೆ ಮಾಡುವಾಗ ಕುಡಿದ ಮತ್ತಿನಲ್ಲಿರುವುದು ಪತ್ತೆಯಾಗಿದೆ. ಆರೋಪಿಯ ರಕ್ತ ಪರೀಕ್ಷೆಯನ್ನು ವೈದ್ಯಕೀಯ ವಿಭಾಗಕ್ಕೆ ಕಳುಹಿಸಲಾಗಿದ್ದು ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.