ಮಂಗಳೂರು ಸಮೀಪ ಸಂಭವಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುರಂತದಲ್ಲಿ ಮಡಿದ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಮಧ್ಯಂತರ ಪರಿಹಾರವನ್ನು ನೀಡುವುದಾಗಿ ಏರ್ ಇಂಡಿಯಾ ವ್ಯವಸ್ಥಾಪಕ ಅರವಿಂದ ಜಾದವ್ ತಿಳಿಸಿದ್ದಾರೆ.
ದುರ್ಘಟನೆಯಲ್ಲಿ ಮಡಿದ ಕುಟುಂಬಗಳಿಗೆ ತಲಾ ಹತ್ತು ಲಕ್ಷ ಹಾಗೂ 12 ವರ್ಷಕ್ಕಿಂತ ಕೆಳಗಿನವರಿಗೆ ತಲಾ ಐದು ಲಕ್ಷ ರೂಪಾಯಿ ನೀಡಲು ನಿರ್ಧರಿಸಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ವಿವರಿಸಿದರು.
ಅಲ್ಲದೇ ದುರಂತದಲ್ಲಿ ಗಾಯಗೊಂಡವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಜಾದವ್ ಹೇಳಿದರು. ಬಜ್ಪೆ ವಿಮಾನ ನಿಲ್ದಾಣ ಸಮೀಪದ ಕೆಂಜಾರುವಿನಲ್ಲಿ ಶನಿವಾರ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 158ಮಂದಿ ಸಾವನ್ನಪ್ಪಿದ್ದು, ಕೇವಲ ಎಂಟು ಪ್ರಯಾಣಿಕರಷ್ಟೇ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.
ದೇಶದ ಇತಿಹಾಸದಲ್ಲಿಯೇ ನಡೆದ ಅತ್ಯಂತ ಭೀಕರ ವಿಮಾನ ದುರಂತ ಇದಾಗಿದ್ದು, ದುರಂತದಲ್ಲಿ ಮಡಿದ ಕುಟುಂಬಗಳಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಪರಿಹಾರವನ್ನು ಮೊತ್ತವನ್ನು ಹೆಚ್ಚಿಸಿ ಘೋಷಿಸಿರುವುದಾಗಿ ಜಾದವ್ ಈ ಸಂದರ್ಭದಲ್ಲಿ ತಿಳಿಸಿದರು. ಈ ಮೊದಲು ಘಟನೆಯಲ್ಲಿ ಮಡಿದ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಘೋಷಿಸಲಾಗಿತ್ತು.
ಏತನ್ಮಧ್ಯೆ ಏರ್ ಇಂಡಿಯಾ ಅಧಿಕಾರಿಗಳು ಪರಿಹಾರದ ಮೊತ್ತವನ್ನು ನಿರ್ಧರಿಸುವ ಸಂಬಂಧ ವೈಮಾನಿಕ ಕಾಯ್ದೆ ಹಾಗೂ ಮಾಂಟ್ರಿಯಲ್ ಅಂತಾರರಾಷ್ಟ್ರೀಯ ವೈಮಾನಿಕ ಒಪ್ಪಂದಗಳ ಕುರಿತು ಪರಾಮರ್ಶೆ ಆರಂಭಿಸಿದ್ದಾರೆ. ಮಧ್ಯಂತರ ಪರಿಹಾರ ನೀಡುವ ಕುರಿತು ಏರ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ಜೊತೆ ಮಾತುಕತೆ ನಡೆಸಿ, ಉಳಿದ ಪರಿಹಾರ ಮೊತ್ತ ನೀಡಲು ನಿರ್ಧರಿಸಲಾಗುವುದು ಎಂದು ಜಾದವ್ ವಿವರಿಸಿದ್ದಾರೆ.
ರಾಜ್ಯದಿಂದಲೂ 2ಲಕ್ಷ ರೂ. ಪರಿಹಾರ: ಅಲ್ಲದೇ ಘಟನೆಯಲ್ಲಿ ಮಡಿದ ಕುಟುಂಬಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಅದೇ ರೀತಿ ಘಟನೆಯಲ್ಲಿ ಗಾಯಗೊಂಡವರ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದರು. ಅದೇ ರೀತಿ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಕೇರಳ ಸರ್ಕಾರ ಸಹ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.