ಮುಂಬೈ ಭಯೋತ್ಪಾದನಾ ದಾಳಿ ಸಂಚಿನ ಪ್ರಮುಖ ಸೂತ್ರಧಾರಿ ಶಂಕಿತ ಉಗ್ರ ಅಬ್ದುಲ್ ಸಮದ್ ಭಟ್ಕಳ ಎಂಬಾತನನ್ನು ಎಟಿಎಸ್ ಅಧಿಕಾರಿಗಳು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿರುವುದಾಗಿ ತಿಳಿಸಿದ್ದಾರೆ.
26/11 ದಾಳಿಯ ಪ್ರಮುಖ ರೂವಾರಿ ಎನ್ನಲಾದ ಭಟ್ಕಳ ನಿವಾಸಿ ಶಂಕಿತ ಉಗ್ರ ಅಬ್ದುಲ್ ಸಮದ್ ದುಬೈನಿಂದ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಎಟಿಎಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ. ಅಲ್ಲದೇ ಸಮದ್ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿಯೂ ತಾನು ಭಾಗಿ ಎಂಬುದಾಗಿ ಎಟಿಎಸ್ ಅಧಿಕಾರಿಗಳಿಗೆ ತಿಳಿಸಿರುವುದಾಗಿ ವಿವರಿಸಿದ್ದಾರೆ.
ರಿಯಾಜ್ ಭಟ್ಕಳ ಸಂಬಂಧಿ: ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಸ್ಥಾಪಕ ರಿಯಾಜ್ ಅಹ್ಮದ್ ಭಟ್ಕಳ ಸಂಬಂಧಿಯಾಗಿರುವ ಸಮದ್ ಭಟ್ಕಳ ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿ ಎನ್ನಲಾಗಿದೆ. ಪುಣೆ ಸ್ಫೋಟದ ಹಿಂದೆ ರಿಯಾಜ್ ಭಟ್ಕಳ ಪ್ರಮುಖ ಆರೋಪಿಯಾಗಿದ್ದು, ಈ ಪ್ರಕರಣದಲ್ಲಿ ಸಮದ್ ಕೂಡ ಶಾಮೀಲು ಎಂದು ತನಿಖೆಯಿಂದ ತಿಳಿದು ಬಂದಿದೆ.
ಫೆಬ್ರವರಿ 13ರಂದು ಪುಣೆಯಲ್ಲಿನ ಗೋರೆಗಾಂವ್ ಪಾರ್ಕ್ ಪ್ರದೇಶದ ಜರ್ಮನ್ ಬೇಕರಿಯಲ್ಲಿ ನಡೆದಿದ್ದ ಸ್ಫೋಟವನ್ನು 'ಸಿಮಿ'ಯ ಅಂಗಸಂಸ್ಥೆ ಹಾಗೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾದ ಜತೆ ನಿಕಟ ಸಂಪರ್ಕ ಹೊಂದಿರುವ 'ಇಂಡಿಯನ್ ಮುಜಾಹಿದೀನ್' ನಡೆಸಿರುವುದು ಬಹುತೇಕ ಖಚಿತವಾಗಿತ್ತು. ಆದರೆ ಐಎಂ ಸ್ಥಾಪಕ ರಿಯಾಜ್ ಭಟ್ಕಳ ನಾಪತ್ತೆಯಾಗಿದ್ದು, ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಎಟಿಎಸ್ ಬಲೆಗೆ ಬಿದ್ದ ದೊಡ್ಡ ಮಿಕ: ಮುಂಬೈ ದಾಳಿ, ಪುಣೆ ಸ್ಫೋಟ ಸೇರಿದಂತೆ ದೇಶದಲ್ಲಿ ನಡೆದಿರುವ ಭಯೋತ್ಪಾದನಾ ದಾಳಿ ಕುರಿತಂತೆ ಸಮದ್ ಬಂಧನದೊಂದಿಗೆ ಎಟಿಎಸ್ ಅಧಿಕಾರಿಗಳು ದೊಡ್ಡ ಯಶಸ್ಸನ್ನೇ ಸಾಧಿಸಿದ್ದಾರೆ. ಸಮದ್ ತನಿಖೆಯಿಂದ ರಿಯಾಜ್ ಭಟ್ಕಳ ವಿವರ, ಅವರು ನಡೆಸಿರುವ ದುಷ್ಕ್ರತ್ಯ ಸೇರಿದಂತೆ ಸ್ಫೋಟಕ ಮಾಹಿತಿಗಳು ಬಯಲಾಗಲಿದೆ. ಆ ನಿಟ್ಟಿನಲ್ಲಿ ಎಟಿಎಸ್ ಅಧಿಕಾರಿಗಳು ಸಮದ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವುದಾಗಿ ವಿವರಿಸಿದ್ದಾರೆ.