ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಮಾನ ದುರಂತ-ಬದುಕುಳಿದವರಿಗೆ ಉದ್ಯೋಗ: ಏರ್ ಇಂಡಿಯಾ (Air India Express | eight survivors | Arvind Jadhav | Mangalore)
ವಿಮಾನ ದುರಂತದ ಸಂದರ್ಭದಲ್ಲಿ ಪಶ್ಚಿಮ ಏಷ್ಯಾದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಎಂಟರಲ್ಲಿ ಏಳು ಮಂದಿಯ ಕೆಲಸದ ಪರ್ಮಿಟ್ಸ್ ಕಳೆದುಹೋಗಿದ್ದು, ಆ ನಿಟ್ಟಿನಲ್ಲಿ ಅವರು ಮತ್ತೆ ದುಬೈನಲ್ಲಿ ತಮ್ಮ ಕೆಲಸಕ್ಕೆ ಮರಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಘಟನೆಯಲ್ಲಿ ಬದುಕುಳಿದ ಎಂಟು ಮಂದಿಗೆ ಅವರಿಗೆ ಬೇಕಾದ ಉದ್ಯೋಗ ಕೊಡುವುದಾಗಿ ಏರ್ ಇಂಡಿಯಾದ ಆಡಳಿತ ನಿರ್ದೇಶಕ ಅರವಿಂದ್ ಜಾದವ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ವಿವರಿಸಿದ್ದಾರೆ.
ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಉಮ್ಮರ್ ಫಾರೂಕ್ ಮೊಹಮ್ಮದ್, ಜೋಯೆಲ್ ಪ್ರತಾಪ್ ಡಿ'ಸೋಜಾ, ಮೊಯಿನ್ ಕುಟ್ಟಿ, ಕೃಷ್ಣನ್ ಕೂಲಿಕ್ಕುನ್ನು, ಜಿ.ಕೆ.ಪ್ರದೀಪ್, ಮೊಹಮ್ಮದ್ ಉಸ್ಮಾನ್, ಪುತ್ತೂರು ಇಸ್ಮಾಯಿಲ್ ಅಬ್ದುಲ್ಲಾ ಕೆಲಸದ ಪರ್ಮಿಟ್ ಕಳೆದುಕೊಂಡಿದ್ದು, ಬದುಕುಳಿದವರಲ್ಲಿ ಏಕೈಕ ಯುವತಿ ಮಣಿಪಾಲ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ ಎಂದು ಜಾದವ್ ತಿಳಿಸಿದ್ದಾರೆ.
ಮೇ 22ರಂದು ಮಂಗಳೂರಿನ ಬಜ್ಪೆಯ ವಿಮಾನ ನಿಲ್ದಾಣ ಸಮೀಪದ ಕೆಂಜಾರುವಿನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 158ಮಂದಿ ಸಾವನ್ನಪ್ಪಿದ್ದರು. ಆದರೆ ಎಂಟು ಮಂದಿ ಪ್ರಯಾಣಿಕರು ಬದುಕುಳಿದಿದ್ದರು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೋಯೆಲ್ ಪ್ರತಾಪ್ ಕಾರ್ಯ ಶ್ಲಾಘನೀಯ: ಘಟನೆಯಲ್ಲಿ ಬದುಕುಳಿದವರಿಗೆ ಉದ್ಯೋಗ ನೀಡುವುದಾಗಿ ತಿಳಿಸಿದ ಜಾದವ್, ಈ ಸಂದರ್ಭದಲ್ಲಿ ಜೋಯಲ್ ಪ್ರತಾಪ್ ಹೆಸರನ್ನು ವಿಶೇಷವಾಗಿ ಉಲ್ಲೇಖಿಸಿದ ಅವರು, ವಿಮಾನ ದುರಂತ ಸಂದರ್ಭದಲ್ಲಿ ಕೆಳಗೆ ಹಾರಿ ಬದುಕುಳಿದ ಜೋಯೆಲ್, ತಕ್ಷಣವೇ ಆಟೋ ರಿಕ್ಷಾದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲದೇ ಘಟನೆ ಸೇರಿದಂತೆ ಹಲವಾರು ಮಹತ್ವದ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಿದ್ದರು. ನಿಜಕ್ಕೂ ಇಂತಹ ಸಂದರ್ಭದಲ್ಲಿ ಆ ವ್ಯಕ್ತಿ ನಡೆದುಕೊಂಡ ರೀತಿ ಶ್ಲಾಘನೀಯವಾದದ್ದು ಎಂದರು. ನಿಜಕ್ಕೂ ನಾವು ಡಿಸೋಜಾ ಅವರ ಕಾರ್ಯವನ್ನು ತುಂಬಾ ಮೆಚ್ಚಿಕೊಂಡಿರುವುದಾಗಿ ತಿಳಿಸಿದರು.