ಮಂಗಳೂರಿನ ವಿಮಾನ ನಿಲ್ದಾಣ ಸಮೀಪ ಸಂಭವಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ದುರಂತದ ಬಿಸಿ ಏರ್ ಇಂಡಿಯಾ ವಿಮಾನಕ್ಕೆ ತಟ್ಟಿದ್ದು, ಇದೀಗ ಪ್ರಯಾಣಿಕರ ಆತಂಕದಿಂದಾಗಿ ಏರ್ ಇಂಡಿಯಾ ಖಾಲಿ, ಖಾಲಿಯಾಗಿ ಸಂಚರಿಸುವಂತಾಗಿದೆ!
ಟಿಕೆಟ್ಗೆ ಕಡಿಮೆ ಬೆಲೆ ಎಂದು ಏರ್ ಇಂಡಿಯಾಕ್ಕೆ ಮುಗಿ ಬೀಳುತ್ತಿದ್ದ ಪ್ರಯಾಣಿಕರು ವಿಮಾನ ದುರಂತ ನಂತರ ಏರ್ ಇಂಡಿಯಾ ಹೆಸರು ಕೇಳಿದ್ರೆ ಬೆಚ್ಚಿ ಬೀಳುವಂತಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಉದ್ಯಾನನಗರಿಯ ಏರ್ ಇಂಡಿಯಾ ಸೆಂಟರ್ ಸಾಕ್ಷಿಯಾಗಿದೆ. ಯಾಕೆಂದರೆ ಟಿಕೆಟ್ ಬುಕ್ ಮಾಡುವವರೇ ಇಲ್ಲವಂತೆ. ಬುಕ್ ಮಾಡಿದ ಟಿಕೆಟನ್ನೂ ಕ್ಯಾನ್ಸಲ್ ಮಾಡುತ್ತಿರುವುದು ಏರ್ ಇಂಡಿಯಾಕ್ಕೆ ಮತ್ತೊಂದು ಹೊಡೆತ ಬಿದ್ದಂತಾಗಿದೆ.
ವಿಮಾನ ದುರಂತದಿಂದಾಗಿ ಭಯಕ್ಕೊಳಗಾದ ಪ್ರಯಾಣಿಕರು ಟಿಕೆಟ್ಗೆ ಕಡಿಮೆ ಬೆಲೆ ಅಂತ ಪ್ರಾಣ ಕಳೆದುಕೊಳ್ಳೋದು ಯಾರಿಗೆ ಬೇಕು ಹೇಳಿ ಎಂಬುದು ಪ್ರಯಾಣಿಕರೊಬ್ಬರ ಬಿಚ್ಚುನುಡಿ. ಹಾಗಾಗಿ ಏರ್ ಇಂಡಿಯಾ ಸೆಂಟರ್ ಬಣಗುಡುವ ಮೂಲಕ ಟಿಕೆಟ್ ಹೋಗಲಿ, ವಿವರಗಳನ್ನು ಕೇಳಲು ಕೂಡ ಯಾರೂ ಬರುತ್ತಿಲ್ಲ ಎಂದು ಏರ್ ಇಂಡಿಯಾ ಸೆಂಟರ್ ಸಿಬ್ಬಂದಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಏರ್ ಇಂಡಿಯಾಕ್ಕೆ ಮಾಡಿದ ಟಿಕೆಟ್ ರದ್ದು ಮಾಡಿ, ಬೇರೆ ವಿಮಾನಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಒಟ್ಟಾರೆ ಏರ್ ಇಂಡಿಯಾ ಟೆಕೆಟ್ ಕೇಳೋರೆ ಇಲ್ಲಾ ಎಂಬುದು ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ.
ಮೇ 22ರಂದು ಮಂಗಳೂರು ಸಮೀಪದ ಬಜ್ಪೆಯ ಕೆಂಜಾರುವಿನಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುರಂತದಲ್ಲಿ 158 ಮಂದಿ ಸಾವನ್ನಪ್ಪಿದ್ದು, ಎಂಟು ಮಂದಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಅಂತೂ ಘಟನೆಯ ಎಫೆಕ್ಟ್ ಏರ್ ಇಂಡಿಯಾದ ಮೇಲೆ ಪರಿಣಾಮ ಬೀರಿದ್ದಂತೂ ಸತ್ಯ.