ಕೇಂದ್ರ ಸಚಿವ ಸಂಪುಟಕ್ಕೆ ಸೇರಲು ರಾಹುಲ್ ಗಾಂಧಿ ಸಮರ್ಥರು ಎಂಬ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ಬಿಜೆಪಿ, ಅಷ್ಟು ಪ್ರತಿಭಾವಂತರಾಗಿದ್ದಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿದೆ.
ಎಲ್ಲಾ 3-4 ತಿಂಗಳಲ್ಲಿ ಪ್ರಧಾನಿ ಸಿಂಗ್ ಈ ಕಾಂಗ್ರೆಸ್ ಯುವ ನಾಯಕನಿಗೆ ಪ್ರಮಾಣ ಪತ್ರ ನೀಡುತ್ತಲೇ ಬಂದಿದ್ದಾರೆ. ರಾಹುಲ್ ಅಷ್ಟೊಂದು ಪ್ರತಿಭಾವಂತರಾಗಿದ್ದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಬಹುದಾಗಿತ್ತು ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ವರದಿಗಾರರಿಗೆ ತಿಳಿಸಿದ್ದಾರೆ.
ಇದು ಕಾಂಗ್ರೆಸ್ನ ಆಂತರಿಕ ವಿಷಯ. ಆದರೆ ಸಮರ್ಥರಾಗಿದ್ದಲ್ಲಿ ರಾಹುಲ್ ಸಂಪುಟಕ್ಕೆ ಸೇರಲಿ ಎಂದವರು ಹೇಳಿದರು.
ಮಾತು ಮುಂದುವರಿಸಿದ ಅವರು ರಾಹುಲ್ ಸಂಪುಟಕ್ಕೆ ಸೇರಿದ್ದಲ್ಲಿ ಅವರ ಕಾರ್ಯವೈಖರಿಯನ್ನು ಗಮನಿಸಲು ನಮಗೆ ಅವಕಾಶ ದೊರೆಯಲಿದೆ ಎಂದು ಹೇಳಿದರು.
ಈ ಹಿಂದೆ ನವದೆಹಲಿಯಲ್ಲಿ 2ನೇ ಅವಧಿಯ ಯುಪಿಎ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರೆದ ರಾಷ್ಟ್ರೀಯ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಸಿಂಗ್, ಕೇಂದ್ರ ಸಚಿವ ಸಂಪುಟಕ್ಕೆ ಸೇರಲು ಸಮರ್ಥರು ಎಂದು ಹೇಳಿದ್ದರು.