ಹೆತ್ತವರ ಸಮ್ಮತಿಯಿಲ್ಲದೆ ಅಂತರ್ಜಾತಿ ಮದುವೆ ಮಾಡಲ್ಲ: ಆರ್ಯಸಮಾಜ
ಚಂಡೀಗಢ, ಬುಧವಾರ, 26 ಮೇ 2010( 11:07 IST )
ಜಾತಿಯ ನಿಯಮಗಳನ್ನು ಮೀರಿ, ಹೆತ್ತವರನ್ನು ತೊರೆದು ಪ್ರೇಮಕ್ಕೆ ಜೈ ಎನ್ನುವ ಪ್ರೇಮಿಗಳು ತಮ್ಮ ಮದುವೆಗಾಗಿ ಆರ್ಯ ಸಮಾಜಕ್ಕೆ ಮೊರೆಹೋಗುವುದು ಸಾಮಾನ್ಯ. ಆದರೆ ಇದೀಗ ಹರಿಯಾಣದ ಆರ್ಯ ಸಮಾಜ ತಂದೆತಾಯಿಯರ ಒಪ್ಪಿಗೆಯಿಲ್ಲದಿದ್ದರೆ ನಾವು ಮದುವೆ ಮಾಡಿಸುವ ಜವಾಬ್ದಾರಿ ಹೊರುವುದಿಲ್ಲ ಎಂದಿರುವುದು ಪ್ರೇಮಿಗಳನ್ನು ಚಿಂತೆಗೀಡು ಮಾಡಿದೆ.
ಈವರೆಗೆ ತಂದೆತಾಯಿಯರ ಒಪ್ಪಿಗೆ ಸಿಗದ ಪ್ರೇಮಿಗಳು ಮದುವೆಯಾಗಲು ಆರ್ಯ ಸಮಾಜಕ್ಕೆ ಧಾವಿಸುತ್ತಿದ್ದರು. ಆರ್ಯ ಸಮಾಜ ಅವರಿಗೆ ಮದುವೆಯೆಂಬ ಪವಿತ್ರ ಬಂಧನಕ್ಕೆ ಸಹಾಯ ಮಾಡುತ್ತಿತ್ತು. ಆದರೆ ಹರಿಯಾಣದ ಆರ್ಯ ಸಮಾಜ ಮಾತ್ರ ಇದೀಗ ತಂದೆತಾಯಿಯರ ಒಪ್ಪಿಗೆಯಿಲ್ಲದೆ ನಾವು ಮದುವೆ ಮಾಡೋದಿಲ್ಲ ಎಂದಿದೆ. ಹರಿಯಾಣದಲ್ಲಿ ಸಹೋದರತ್ವ ಹಾಗ ಒಂದೇ ಹಳ್ಳಿಯ ಮಂದಿ ಪರಸ್ಪರ ಮದುವೆಯಾಗುವಂತಿಲ್ಲ ಎಂಬ ನಿಯಮವಿದೆ ಎಂಬುದು ಇಲ್ಲಿ ಗಮನಾರ್ಹ.
ಹರಿಯಾಣ ಆರ್ಯ ಸಮಾಜ ಪ್ರತಿನಿಧಿ ಸಭಾದ ಮುಖ್ಯಸ್ಥ ಆಚಾರ್ಯ ಬಲದೇವ ಅವರು ಈ ಬಗ್ಗೆ ಮಾತನಾಡುತ್ತಾ, ಒಂದೇ ಗೊತ್ರ(ಸಗೋತ್ರ) ಅಥವಾ ಒಂದೇ ಹಳ್ಳಿಯ ಜೋಡಿಗಳ ಮದುವೆಗೆ ನಾವು ಸಮ್ಮತಿ ನೀಡುವುದಿಲ್ಲ. ಅಲ್ಲದೆ, ಸಮಾಜದ ನಿಯಮಗಳನ್ನು ಧಿಕ್ಕರಿಸಿ ಮದುವೆಯಾಗುವುದು ಕೂಡಾ ನಮಗೆ ಸಮ್ಮತವಲ್ಲ ಎಂದು ಅವರು ಹೇಳಿದ್ದಾರೆ.
ನಾವು ಅಂತರ್ ಜಾತಿ ವಿವಾಹವನ್ನು ವಿರೋಧಿಸುವುದಿಲ್ಲ. ಆದರೆ ಅಂತರ್ ಜಾತಿ ವಿವಾಹಕ್ಕೆ ತಂದೆ ತಾಯಿಯರ ಒಪ್ಪಿಗೆ ಬೇಕು ಎಂಬುದು ನಮ್ಮ ವಾದ ಅಷ್ಟೆ. ತುಂಬ ಸಣ್ಣ ವಯಸ್ಸಿನಲ್ಲಿ ಮದುವೆಯ ಬಗ್ಗೆ ಸ್ಪಷ್ಟ ಕಲ್ಪನೆಗಳಿರುವುದಿಲ್ಲ. ಯುವಕ ಯುವತಿಯರು ಕೇವಲ ಸೌಂದರ್ಯದಿಂದ ಪರಸ್ಪರ ಆಕರ್ಷಿತರಾಗಿ ತಂದೆತಾಯಿಯರನ್ನು ಧಿಕ್ಕರಿಸಿ ಮದುವೆಯಾಗುತ್ತಾರೆ. ಆದರೆ ಇಂತಹ ಮದುವೆ ಒಳ್ಳೆಯದಲ್ಲ. ಯಾಕೆಂದರೆ ಇಂತಹ ಸಂದರ್ಭದಲ್ಲಿ ಪರಸ್ಪರ ಅರಿತುಕೊಂಡು ಬಾಳಲು ಹೊರಡುವಾಗ ಅವರ ನಡುವೆ ವಿರಸ ಮಾಡುತ್ತದೆ ಎಂದು ಬಲದೇವ್ ಹೇಳಿದ್ದಾರೆ.