ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಚಿವರ ವಿರುದ್ಧ ಪ್ರತಿಭಟನೆ: ಗೋವಾ ಜನರು ಕಿರುಚಾಡುವ ಹಂದಿಗಳು! (NGOs | Goans-as-pigs | Goa | Churchill Alemao | Goa Bachao Abhiyaan,)
ಸಚಿವರ ವಿರುದ್ಧ ಪ್ರತಿಭಟನೆ: ಗೋವಾ ಜನರು ಕಿರುಚಾಡುವ ಹಂದಿಗಳು!
ಪಣಜಿ, ಬುಧವಾರ, 26 ಮೇ 2010( 12:05 IST )
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ರಾವಣ, ಬೊ...ಮಗ ಎಂದೆಲ್ಲಾ ಬಹಿರಂಗ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವಂತೆಯೇ, ಗೋವಾದ ಸಚಿವರೊಬ್ಬರು ಗೋವಾದ ಜನರು ಕಿರುಚುವ ಹಂದಿಗಳು ಎಂದು ಬಹಿರಂಗವಾಗಿ ಕಿಡಿಕಾರುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಘಟನೆ ನಡೆದಿದೆ.
ಗೋವಾದವರು ಕಿರುಚಾಡುವ ಕೊಳಕು ಜನರು ಎಂಬ ಅರ್ಥದಲ್ಲಿ ಹಂದಿಗೆ ಹೋಲಿಸಿರುವ ಸಚಿವರ ಹೇಳಿಕೆಯನ್ನು ಖಂಡಿಸಿ ಸ್ಥಳೀಯ ಎನ್ಜಿಒ ಹಾಗೂ ಗೋವಾ ಸಂಘ-ಸಂಸ್ಥೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಗೋವಾದ ಲೋಕೋಪಯೋಗಿ ಸಚಿವ ಚರ್ಚಿಲ್ ಅಲೆಮಾವೋಸ್ ಅವರ ಹೇಳಿಕೆಯಿಂದ ರೋಸಿಹೋದ ವಿಲೇಜ್ ಗ್ರೂಫ್ಸ್ ಆಫ್ ಗೋವಾ(ವಿಜಿಜಿ) ದಕ್ಷಿಣ ಗೋವಾದ ಹಳ್ಳಿಗಳಲ್ಲಿ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಸಚಿವರ ಆಕ್ರೋಶಕ್ಕೆ ಕಾರಣ ಏನು?: ಸ್ಥಳೀಯವಾಗಿ ರಾಜ್ಯ ಸರ್ಕಾರ ಬೃಹತ್ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿದ ಬೆನ್ನಲ್ಲೇ ಗೋವಾದ ಜನರು ಕಿರುಚುವ ಹಂದಿಗಳಂತೆ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಸಚಿವ ಚರ್ಚಿಲ್ ಕಳೆದ ವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ವ್ಯಂಗ್ಯವಾಡಿದ್ದರು.
ಇಲ್ಲಿಂದ 45ಕಿ.ಮೀ.ದೂರದಲ್ಲಿರುವ ಕಾರ್ಮೋನಾ ಗ್ರಾಮದಲ್ಲಿ ಐಶಾರಾಮಿ ಲಕ್ಸುರಿ ಮನೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಇದರಿಂದಾಗಿ ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು, ಎನ್ಜಿಒ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು.
ಸರ್ಕಾರದ ಯೋಜನೆಯಡಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕಾರ್ಮೋನಾ ಹಳ್ಳಿಯಲ್ಲಿ ಸುಮಾರು 600 ಪ್ಲ್ಯಾಟ್ಸ್ನ ಬೃಹತ್ ಕಟ್ಟಡ ತಲೆ ಎತ್ತುತ್ತಿರುವುದನ್ನು ಖಂಡಿಸಿ ಗೋವಾ ಬಚಾವೋ ಅಭಿಯಾನ, ಅಂಬ್ರೆಲ್ಲಾ ಎನ್ಜಿಒ ಹಾಗೂ ವಿಜಿಜಿ ಸೇರಿದಂತೆ ಹಲವು ಸಂಘಟನೆಗಳು ಈ ಯೋಜನೆಯನ್ನು ವಿರೋಧಿಸಿದ್ದವು.
ಆ ನಿಟ್ಟಿನಲ್ಲಿ ಗೋವಾದ ಜನರು ಹಂದಿಗಳಂತೆ ಕಿರುಚಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಸಚಿವ ಚರ್ಚಿಲ್ ತೀವ್ರ ವಿವಾದಕ್ಕೆ ಈಡಾಗಿದ್ದಾರೆ.
ಆದರೆ ಈ ಬೃಹತ್ ಕಟ್ಟಡ ನಿರ್ಮಾಣದಿಂದ ಮೂಲಭೂತ ಸೌಕರ್ಯಗಳಾದ ವಿದ್ಯುತ್, ನೀರು ಮತ್ತು ಕಸದ ವಿಲೇವಾರಿಗಳು ಹಳ್ಳಿಗಳಿಗೆ ದೊಡ್ಡ ಸಮಸ್ಯೆಯನ್ನು ತಂದೊಡ್ಡಲಿದೆ ಎಂಬುದು ಎನ್ಜಿಒಗಳ ಆರೋಪ.
ಹಂದಿಗಳಿಗೆ ಆಹಾರ ನೀಡುವವರು ಯಾರು?: ಗೋವಾದ ಜನರನ್ನು ಚರ್ಚಿಲ್ ಹಂದಿ ಎಂದು ಆರೋಪಿಸಿದ್ದಾರಲ್ಲ, ಹಾಗಾದರೆ ಈ ಹಂದಿಗಳಿಗೆ ಯಾರು ಆಹಾರ ಒದಗಿಸುತ್ತಾರೆ? ಮಗಾ ಕನ್ಸ್ಸ್ಟ್ರಕ್ಷನ್ ಕಂಪನಿ ಹಂದಿಗಳಿಗೆ ಆಹಾರ ನೀಡುತ್ತವೆಯೇ? ಅಥವಾ ಚರ್ಚಿಲ್ ಒದಗಿಸುತ್ತಾರೋ ಎಂಬುದಾಗಿ ವಿಜಿಜಿ ವಕ್ತಾರ ಝಾರಿನಾಹ್ ಡಾ ಕುನ್ನಾ ಅವರು ದೇಶೀಯ ಹಂದಿ ವೇಷಧಾರಿಯಂತೆ ಬಟ್ಟೆ ಧರಿಸಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಗಂಭೀರವಾಗಿ ಪ್ರಶ್ನಿಸಿದರು.
ಜನಪ್ರತಿನಿಧಿಗಳಿಗೆ ಸಾಮಾಜಿಕ ಕಾಳಜಿ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಕಿಡಿಕಾರಿರುವ ಕೋಲ್ವಾ ಸಿವಿಕ್ ಫೋರಂನ ಜುಡಿತ್ ಅಲ್ಮೇಡಾ ಆರೋಪಿಸಿದ್ದು, ಜನರ ಪ್ರತಿಭಟನೆಯನ್ನೇ ತೆಗಳಿ ಸ್ಥಳೀಯರನ್ನು ಅಪಮಾನಿಸುವ ಕೆಲಸವನ್ನು ಸಚಿವ ಚರ್ಚಿಲ್ ಮಾಡಿದ್ದಾರೆ. ಇದರಿಂದಾಗಿ ರಾಜಕಾರಣಿಗಳು ಎಷ್ಟು ಭ್ರಷ್ಟರಾಗಿದ್ದಾರೆಂಬುದಕ್ಕೆ ಈ ಮೆಗಾ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸಚಿವರು ಕುಮ್ಮಕ್ಕು ನೀಡುತ್ತಿರುವುದೇ ಸಾಕ್ಷಿ ಎಂದು ದೂರಿದರು.
ಗೋವಾದ ಜನರನ್ನು ಅವಮಾನಿಸಿರುವ ಚರ್ಚಿಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಈ ಹಂದಿಗಳ (?) ಕ್ಷಮೆಯಾಚಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.