ಬಜ್ಪೆ ವಿಮಾನ ನಿಲ್ದಾಣ ಸಮೀಪ ಸಂಭವಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುರಂತದಲ್ಲಿ ಮಡಿದವರಲ್ಲಿ ಗುರುತು ಪತ್ತೆಹಚ್ಚಲಾಗದ 22 ಶವಗಳಲ್ಲಿ ಬುಧವಾರ ಹತ್ತು ಶವಗಳ ಗುರುತು ಪತ್ತೆ ಹಚ್ಚಲಾಗಿದೆ. ಆದರೆ ಉಡುಪಿಯ ನಿವಾಸಿ ಸಮೀರ್ ಎಂಬವರು ತಮ್ಮ ಸಹೋದರನ ಶವವನ್ನು ಸ್ವೀಕರಿಸಲು ನಿರಾಕರಿಸುವ ಮೂಲಕ ಗೊಂದಲ ಉಂಟಾಗಿದೆ.
22 ಶವಗಳಲ್ಲಿ ಹತ್ತು ಮಂದಿ ಗುರುತು ಪತ್ತೆ ಹಚ್ಚಿದ್ದು, ಡಿಎನ್ಎ ಪರೀಕ್ಷೆಯಲ್ಲಿ ಸಮೀರ್ ಸಹೋದರ ನವೀದ್ ಇಬ್ರಾಹಿಂ ಶವದ ಗುರುತು ಪತ್ತೆ ಹಚ್ಚಲಾಗಿತ್ತು. ಆದರೆ ತನ್ನ ಸಹೋದರ ನವೀದ್ಗೆ ಮೀಸೆ ಇರಲಿಲ್ಲ, ಅಲ್ಲದೇ ಎದೆ ಮೇಲೆ ಕೂದಲು ಇರಲಿಲ್ಲವಾಗಿತ್ತು. ತಮಗೆ ನೀಡಿರುವ ಶವದಲ್ಲಿ ಮೀಸೆ ಮತ್ತು ಎದೆ ಮೇಲೆ ಕೂದಲು ಇದ್ದು, ಅದು ತನ್ನ ಸಹೋದರನ ಶವ ಅಲ್ಲ ಎಂಬುದು ಸಮೀರ್ ವಾದ. ಹಾಗಾಗಿ ಸಮೀರ್ ಕುಟುಂಬ ಇದೀಗ ಶವ ಸ್ವೀಕರಿಸಲು ನಿರಾಕರಿಸುವ ಮೂಲಕ ವೈದ್ಯರು ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಹತ್ತು ಶವಗಳ ಗುರುತು ಪತ್ತೆ: ವಿಮಾನ ದುರಂತದಲ್ಲಿ ಮಡಿದ 22 ಮಂದಿಯ ಗುರುತು ಪತ್ತೆ ಕಷ್ಟವಾಗಿದ್ದರಿಂದ ಮೃತರ ಸಂಬಂಧಿಗಳಿಂದ 34 ರಕ್ತದ ಮಾದರಿಗಳನ್ನು ಸಂಗ್ರಹಿಸಿ ಹೈದರಾಬಾದ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ನಿಟ್ಟಿನಲ್ಲಿ ಪ್ರಯೋಗಾಲಯದ ಡಾ.ಮಧುಸೂಧನ್ ರೆಡ್ಡಿ ಅವರ ನೇತೃತ್ವದಲ್ಲಿ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು.
ಹತ್ತು ಶವಗಳಲ್ಲಿ 5 ಕರ್ನಾಟಕ, 3 ಕೇರಳ, 1 ಪಶ್ಚಿಮ ಬಂಗಾಳ ಹಾಗೂ ಒಂದು ಮಧ್ಯಪ್ರದೇಶದವರ ಮೃತದೇಹ ಎಂದು ಗುರುತಿಸಲಾಗಿದೆ. ಇದರಲ್ಲಿ ಇಬ್ಬರು ಏರ್ ಇಂಡಿಯಾ ಸಿಬ್ಬಂದಿಗಳಾದ ಯುಗಾಂತರ್, ಮೊಹಮ್ಮದ್ ಅಲಿ ಶವ ಕೂಡ ಸೇರಿದೆ.
ಉಳಿದ 12 ಶವಗಳ ಗುರುತನ್ನು ಗುರುವಾರ ಸಂಜೆಯೊಳಗೆ ಪತ್ತೆ ಹಚ್ಚುವುದಾಗಿ ಸಿಎಫ್ಡಿ ನಿರ್ದೇಶಕ ಜೆ.ಗೌರಿಶಂಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.