ಕೊನೆಗೂ ಕಳೆದೆರಡು ದಿಗಳಿಂದ ದೇಶದಾದ್ಯಂತ ನಡೆಯುತ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಮುಷ್ಕರ ಬುಧವಾರ ಅಂತ್ಯಗೊಂಡಿದೆ. ಆದರೂ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿತ್ತು.
ವ್ಯವಸ್ಥೆ ಸಮರ್ಪಕವಾಗಲು ಇನ್ನೂ ಒಂದೆರಡು ದಿನಗಳು ತಗಲುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಕೆಲವು ನೌಕರರರು ನಡೆಸುತ್ತಿದ್ದ ಮುಷ್ಕರಕ್ಕೆ ದೆಹಲಿ ಹೈಕೋರ್ಟ್ ನಿರ್ಬಂಧಿಸಿದ ಬೆನ್ನಲ್ಲೇ ಮುಷ್ಕರ ಕೈಬಿಡಲಾಗಿದೆ. ಅಲ್ಲದೆ ಮುಷ್ಕರ ನಿರತ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಮುಂದಾಗಿತ್ತು.
ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಷ್ಕರ ಕೈಬಿಡಲಾಗುತ್ತಿದೆ ಎಂದು ಏರ್ ಕಾರ್ಪೋರೇಷನ್ ನೌಕರರ ಒಕ್ಕೂಟ (ಎಸಿಇಯು) ತಿಳಿಸಿದೆ.
ಮುಖ್ಯ ಕಾರ್ಮಿಕ ಆಯುಕ್ತರೊಂದಿಗೆ ಸಮಾಲೋಚನೆ ನಡೆಸಿದರ ನಂತರ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಎಸಿಇಯು ಮುಖಂಡ ಕೆ.ಬಿ ಕದಿಯನ್ ತಿಳಿಸಿದ್ದಾರೆ.
ಏರ್ ಇಂಡಿಯಾ ಮಂಗಳವಾರ ಧಿಡೀರ್ ಮುಷ್ಕರ ಘೋಷಿಸಿತ್ತು. ಇದರಿಂದಾಗಿ ಕಳೆದೆರಡು ದಿನಗಳಲ್ಲಾಗಿ ಒಟ್ಟು 130ಕ್ಕೂ ವಿಮಾನಗಳ ಹಾರಾಟ ರದ್ದುಗೊಂಡಿದ್ದವು.