ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಾತಿ ದ್ವೇಷ: ದಂಪತಿಗಳನ್ನು ಕಲ್ಲು ಹೊಡೆದು ಕೊಂದ ಗ್ರಾಮಸ್ಥರು! (Honour killing | Hyderabad | Andhra Pradesh | Telangana)
ಜಾತಿ ದ್ವೇಷ: ದಂಪತಿಗಳನ್ನು ಕಲ್ಲು ಹೊಡೆದು ಕೊಂದ ಗ್ರಾಮಸ್ಥರು!
ಹೈದರಾಬಾದ್, ಗುರುವಾರ, 27 ಮೇ 2010( 17:28 IST )
ದೇಶಾದ್ಯಂತ ಮರ್ಯಾದಾ ಹತ್ಯೆಗಳು ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಮಾನವ ಹಕ್ಕು ಸಂಘಟನೆಗಳು ಆತಂಕ ವ್ಯಕ್ತಪಡಿಸುತ್ತಿರುವ ನಡುವೆಯೇ, ಮನೆಯವರ ವಿರೋಧದಿಂದ ಓಡಿಹೋಗಿ ಮದುವೆಯಾದ ಜೋಡಿಗಳನ್ನು ಕಲ್ಲು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ತೆಲಂಗಾಣ ವ್ಯಾಪ್ತಿಯ ನಿಜಾಮಾಬಾದ್ನ ಕೃಷ್ಣಾಜಿವಾದಿ ಗ್ರಾಮದ ಕುಪಿತಗೊಂಡ ಜನರು ನೂತನ ಜೋಡಿಯನ್ನು ಕಲ್ಲು ಹೊಡೆದು ಕೊಂದಿರುವ ಭೀಕರ ಘಟನೆ ಬುಧವಾರ ರಾತ್ರಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಾತಿಯೇ ಹತ್ಯೆಗೆ ಕಾರಣ: ಸನ್ಕಾರಾ ಶ್ರೀನಿವಾಸ್(32) ಎಂಬಾತ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ, 22ರ ಹರೆಯದ ಸ್ವಪ್ನಾ ರೆಡ್ಡಿ ಮೇಲ್ವರ್ಗದ ಜಾತಿಯವಳಾಗಿದ್ದಳು. ಇವರಿಬ್ಬರು ಪ್ರೀತಿಸುತ್ತಿದ್ದು, ಮದುವೆಗೆ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ. ಆರು ತಿಂಗಳ ಹಿಂದೆಯೇ ಓಡಿಹೋಗಿ ವಿವಾಹವಾಗಿದ್ದರು.
ಕೆಳಜಾತಿಯವನಾದ ಶ್ರೀನಿವಾಸನ ಜೊತೆಗೆ ಯಾವುದೇ ಕಾರಣಕ್ಕೂ ಮದುವೆ ಸಾಧ್ಯ ಇಲ್ಲ ಎಂದು ಸ್ವಪ್ನಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಶ್ರೀನಿವಾಸ ಈಗಾಗಲೇ ಮದುವೆಯಾಗಿದ್ದು, ಆತನಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇದು ಮನೆತನದ ಮರ್ಯಾದೆ ಪ್ರಶ್ನೆಯಾಗಿದ್ದು, ಆತನನ್ನು ಮದುವೆಯಾಗದಂತೆ ಸ್ವಪ್ನಾಗೆ ಪೋಷಕರು ತಿಳಿಸಿದ್ದರು. ಆದರೂ ಆಕೆ ಮನೆಯವರ ಮಾತನ್ನು ಲೆಕ್ಕಿಸದೆ ಓಡಿಹೋಗಿ ಶ್ರೀನಿವಾಸನ ಜೊತೆ ವಿವಾಹವಾಗಿ ಸಂಸಾರ ಹೂಡಿದ್ದಳು.
ಕಲ್ಲಿನಿಂದ ಹೊಡೆದು ಹತ್ಯೆ: ನೂತನವಾಗಿ ಹಸೆಮಣೆ ಏರಿದ್ದ ದಂಪತಿಗಳು ಹೈದರಬಾದ್ನಲ್ಲಿ ವಾಸ್ತವ್ಯ ಹೂಡಿದ್ದರು. ಶ್ರೀನಿವಾಸ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ ಮೂರು ದಿನಗಳ ಹಿಂದಷ್ಟೇ ತಮ್ಮ ಗ್ರಾಮಕ್ಕೆ ವಾಪಸಾಗಿದ್ದರು. ಗಂಡ-ಹೆಂಡತಿ ಊರಿಗೆ ಬಂದ ವಿಷಯ ತಿಳಿದ ಸೌಮ್ಯ ಸಂಬಂಧಿಗಳು, ಕೆಲವು ವಿಷಯದ ಬಗ್ಗೆ ಮಾತನಾಡಲು ಇದೆ ಎಂದು ಹೇಳಿ ಶ್ರೀನಿವಾಸ ಮತ್ತು ಸ್ವಪ್ನಾಳನ್ನು ತಮ್ಮ ಬಳಿಗೆ ಕರೆಯಿಸಿಕೊಂಡಿದ್ದರು.
ಮಾತುಕತೆ ಸಂದರ್ಭದಲ್ಲಿ ಸ್ವಪ್ನಾ ಸಂಬಂಧಿಗಳು ಶ್ರೀನಿವಾಸನನ್ನು ತರಾಟೆಗೆ ತೆಗೆದುಕೊಂಡು, ತಳ್ಳಾಟ ನಡೆಸುತ್ತಿದ್ದಾಗ ಸ್ವಪ್ನಾ ತನ್ನ ಗಂಡನ ರಕ್ಷಣೆಗೆ ನಿಂತಳು. ಆಗ ಸಂಬಂಧಿಗಳು ಇಬ್ಬರಿಗೂ ಹೊಡೆದಿದ್ದರು. ನಂತರ ಇಬ್ಬರನ್ನು ಜಲ್ಲೆಯೊಂದರಲ್ಲಿ ಕಟ್ಟಿಹಾಕಿದ ಸುಮಾರು 30 ಮಂದಿಯಷ್ಟಿದ್ದ ದಾಳಿಕೋರರು ಆಕ್ರೋಶಿತರಾಗಿ ಕಲ್ಲು ಹೊಡೆದು ಅವರನ್ನು ಸಾಯಿಸಿಬಿಟ್ಟಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮೂರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.