ದೇಶದ್ರೋಹದ ಆರೋಪದ ಮೇಲೆ ಮಾಧುರಿ ಗುಪ್ತಾ ಸೆರೆ ಸಿಕ್ಕ ಘಟನೆ ಮರೆಯುವ ಮನ್ನವೇ, ಇದೀಗ ಪಾಕಿಸ್ತಾನದ ಐಎಸ್ಐಗೆ ರಹಸ್ಯ ಮಾಹಿತಿ ನೀಡಿದ ಆರೋಪದ ಮೇಲೆ ಭಾರತದ ನೌಕಾಪಡೆಯ ಉದ್ಯೋಗಿಯೊಬ್ಬನನ್ನು ಪೊಲೀಸರು ಗುರುವಾರ ಸೆರೆಹಿಡಿದಿದ್ದಾರೆ.
ಬಂಧಿತನಿಂದ ಹಿಂದಾನ್ ಏರ್ ಬೇಸ್ನ ಫೋಟೋಗ್ರಾಫ್ಸ್, ಮೀರತ್ ಕಂಟೋನ್ಮೆಂಟ್ ಮ್ಯಾಪ್ ಹಾಗೂ ಕೆಲವು ರಹಸ್ಯ ಮತ್ತು ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ನೌಕಾಪಡೆಯ ಏರ್ಕ್ರಾಫ್ಟ್ ನಿರ್ವಹಣಾ ಘಟಕದ ಉದ್ಯೋಗಿ 24ರ ಹರೆಯದ ಚಾಂದ್ ಕುಮಾರ್ ಪ್ರಸಾದ್ ಇದೀಗ ದೇಶದ್ರೋಹದ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಸಾದ್ನನ್ನು ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಬುಧವಾರ ದೆಹಲಿಯ ವಿಶೇಷ ಪೊಲೀಸ್ ತಂಡ ಸೆರೆ ಹಿಡಿದಿರುವುದಾಗಿ ಮೂಲಗಳು ಹೇಳಿವೆ.
ಪ್ರಸಾದ್ ಮಹತ್ವದ ಮಾಹಿತಿಗಳನ್ನು ಮತ್ತೊಬ್ಬ ವ್ಯಕ್ತಿಯಿಂದ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ರವಾನಿಸುತ್ತಿದ್ದ ಎಂದು ಪೊಲೀಸರು ಗಂಭೀರವಾಗಿ ಆರೋಪಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಪ್ರಸಾದ್ನನ್ನು ಬಂಧಿಸಿದ್ದು, ಗುರುವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಅಲ್ಲದೇ ಆತನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದ್ದರು.
ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಎಫ್ಎಸ್ ಮಹಿಳಾ ಅಧಿಕಾರಿಯಾಗಿದ್ದ ಮಾಧುರಿ ಗುಪ್ತಾ (54) ಭಾರತದ ರಹಸ್ಯ ದಾಖಲೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುತ್ತಿರುವುದನ್ನು ಖಚಿತಪಡಿಸಿಕೊಂಡ ಭಾರತದ ವಿದೇಶಾಂಗ ಇಲಾಖೆಯು,ಇತ್ತೀಚೆಗೆ ಸಾರ್ಕ್ ಶೃಂಗಸಭೆಯ ಕುರಿತು ಮಾತುಕತೆ ನಡೆಸುವುದಿದೆ ಎಂಬ ಕಾರಣ ನೀಡಿ ಆಕೆಯನ್ನು ದೆಹಲಿಗೆ ಕರೆಸಿಕೊಂಡು ವಿಚಾರಣೆ ನಡೆಸಿ ಬಂಧಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.