ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ನೂ ಎಷ್ಟು ಮುಗ್ದ ಜನರ ಬಲಿಯಾಗಬೇಕು?: ಕೇಂದ್ರಕ್ಕೆ ಬಿಜೆಪಿ (Naxal | west Midnapore | Maoists | BJP | Manmohan singh)
ಇನ್ನೂ ಎಷ್ಟು ಮುಗ್ದ ಜನರ ಬಲಿಯಾಗಬೇಕು?: ಕೇಂದ್ರಕ್ಕೆ ಬಿಜೆಪಿ
ನವದೆಹಲಿ, ಶುಕ್ರವಾರ, 28 ಮೇ 2010( 12:02 IST )
ಪಶ್ಚಿಮಬಂಗಾಳದ ಪಶ್ಚಿಮ ಮಿಡ್ನಾಪುರದಲ್ಲಿ ನಕ್ಸಲೀಯರು ರೈಲ್ವೆ ಹಳಿಯನ್ನು ಸ್ಫೋಟಿಸಿ 65 ಜನರ ಹತ್ಯೆಗೆ ಕಾರಣವಾಗಿರುವ ಘಟನೆಯನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸಿದ್ದು, ನಕ್ಸಲೀಯರ ಬಗ್ಗೆ ಕೇಂದ್ರ ಸರ್ಕಾರದ ದ್ವಂದ್ವ ನಿಲುವಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.
ಕೆಂಪು ಉಗ್ರರು ತಮ್ಮ ಅಟ್ಟಹಾಸವನ್ನು ಮುಂದುವರಿಸಿದ್ದು, ಇನ್ನೂ ಎಷ್ಟು ಜನ ಮುಗ್ದರ ಬಲಿಯಾಗಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ನಕ್ಸಲೀಯರ ಹತ್ಯೆಯಾದಾಗ ಮಾನವ ಹಕ್ಕುಗಳ ಸಂಘಟನೆ, ಪ್ರಗತಿಪರರು ತೀವ್ರ ಖಂಡನೆ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಮುಗ್ದ ಜನರ ಬಲಿಯಾದಾಗ ಮಾನವ ಹಕ್ಕು ಸಂಘಟನೆಗಳು ಮೌನವಾಗಿರುವುದು ಏತಕ್ಕೆ? ನಕ್ಸಲೀಯರಿಂದ ಬಲಿಯಾದ ಮುಗ್ದರಿಗೆ ಮಾನವ ಹಕ್ಕು ಅನ್ವಯಿಸುವುದಿಲ್ಲವೇ ಎಂದು ಕಿಡಿಕಾರಿದರು. ಆ ನಿಟ್ಟಿನಲ್ಲಿ ಮಾನವ ಹಕ್ಕು ಸಂಘಟನೆಗಳು,ಪ್ರಗತಿಪರರು ಮುಗ್ದರ ಹತ್ಯೆಯ ಬಗ್ಗೆಯೂ ಪ್ರತಿಕ್ರಿಯಿಸಲಿ ಎಂದು ಸವಾಲು ಹಾಕಿದರು.
ದೇಶಾದ್ಯಂತ ನಕ್ಸಲೀಯರು ಮುಗ್ದ ಜನರು, ಪೊಲೀಸರು, ಸಿಆರ್ಪಿಎಫ್ ಸಿಬ್ಬಂದಿಗಳ ಮಾರಣ ಹೋಮ ನಡೆಸುತ್ತಿದ್ದರು ಕೂಡ ಕೇಂದ್ರ ಸರ್ಕಾರ ಅವರ ವಿರುದ್ಧ ಕಠಿಣ ಕಾರ್ಯಾಚರಣೆಗೆ ಮುಂದಾಗದೆ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಪ್ರಸಾದ್ ಆರೋಪಿಸಿದರು.
ದಾಂತೇವಾಡದಲ್ಲಿ ನಕ್ಸಲೀಯರು ಕಳೆದ ತಿಂಗಳು 76ಸಿಆರ್ಪಿಎಫ್ ಸಿಬ್ಬಂದಿಗಳನ್ನು ಹತ್ಯೆಗೈದಿದ್ದರು. ನಂತರ ಮತ್ತೆ ದಾಳಿ ನಡೆಸುವ ಮೂಲಕ 20 ನಾಗರಿಕರು, ಪೊಲೀಸರು ಸೇರಿದಂತೆ 40 ಜನರನ್ನು ಹತ್ಯೆಗೈದರು. ರೈಲ್ವೆ ಹಳಿ ಸ್ಫೋಟ, ಶಾಲೆ ಸ್ಫೋಟದಂತಹ ದುಷ್ಕೃತ್ಯಗಳನ್ನು ನಕ್ಸಲೀಯರು ನಡೆಸುತ್ತಲೇ ಇದ್ದಾರೆ. ಆದರೂ ಕೇಂದ್ರ ಸರ್ಕಾರ ಕಠಿಣ ನಿಲುವು ತಳೆಯುವಲ್ಲಿ ಮೀನಮೇಷ ಎಣಿಸುತ್ತಿದೆ.
ಇದೀಗ ನಕ್ಸಲೀಯರು ಪಶ್ಚಿಮಬಂಗಾಳದಲ್ಲಿಯೂ ಅಟ್ಟಹಾಸ ಮೆರೆಯುವ ಮೂಲಕ 65 ಮುಗ್ದ ಪ್ರಯಾಣಿಕರನ್ನು ಹತ್ಯೆಗೈದಿದ್ದಾರೆ ಎಂದರು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಕ್ಸಲ್ ಹಾವಳಿಯನ್ನು ತಡೆಗಟ್ಟಲು ಮುಂದಾಗಬೇಕು ಎಂದು ಪ್ರಸಾದ್ ಈ ಸಂದರ್ಭದಲ್ಲಿ ಒತ್ತಾಯಿಸಿದರು.