ಕಡಪ ಸಂಸದ ವೈಎಸ್ ಜಗನ್ ರೆಡ್ಡಿ ಸಾಂತ್ವನ ಯಾತ್ರೆ ಹಮ್ಮಿಕೊಂಡಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಫೈಯರಿಂಗ್ ನಡೆಸಿದ್ದನ್ನು ಖಂಡಿಸಿ ತೆಲಂಗಾಣ ಪರ ಸಂಘಟನೆಗಳು ಶನಿವಾರ ಬಂದ್ಗೆ ಕರೆ ನೀಡಿದ್ದು, ನೂರಾರು ಪ್ರಯಾಣಿಕರು ಸಂಚಾರ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಅಲ್ಲದೇ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬಂದ್ ಸಂದರ್ಭದಲ್ಲಿ ಆರು ಖಾಸಗಿ ಬಸ್ ಮತ್ತು ರಾಜ್ಯ ಸರ್ಕಾರ ಸ್ವಾಮಿತ್ವದ ರೋಡ್ ಟ್ರಾನ್ಸ್ಪೋರ್ಟ್ ಕಾರ್ಪೋರೇಷನ್ ಬಸ್ಗಳಿಗೆ ಬೆಂಕಿ ಹಚ್ಚಿ ಸುಡಲಾಗಿತ್ತು, ತೆಲಂಗಾಣ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಸಿಡಿಸಿದ್ದರು.
ಅಲ್ಲದೇ ಆಕ್ರೋಶಿತ ಪ್ರತಿಭಟನಾಕಾರರು ಖಾಸಗಿ ಕಾಲೇಜಿನ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದರು, ವಾರಂಗಲ್ನಲ್ಲಿಯೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣದ ಒಂಬತ್ತು ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ಬಸ್ಗಳ ಮೇಲೆ ದಾಳಿ ನಡೆಸಿದ ಪರಿಣಾಮ, ಆರ್ಟಿಸಿ ಎಲ್ಲಾ ಬಸ್ ಸಂಚಾರವನ್ನು ರದ್ದುಗೊಳಿಸಿದೆ. ಇದರಿಂದಾಗಿ ಪ್ರಯಾಣಿಕರು ಬಸ್, ಆಟೋ ಸಂಚಾರವಿಲ್ಲದೆ ತೊಂದರೆ ಅನುಭವಿಸುವಂತಾಯಿತು. ಪ್ರತಿ ಜಿಲ್ಲೆಯ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ.
ವಾರಂಗಲ್, ಕರೀಂನಗರ್, ನಿಜಾಮಬಾದ್, ಅದಿಲಾಬಾದ್, ಖಮ್ಮಮ್, ಮಹಬೂಬಾನಗರ್, ನಲ್ಗೊಂಡಾ ಮತ್ತು ಮೇದಕ್ ಜಿಲ್ಲೆಗಳಲ್ಲಿನ ಅಂಗಡಿ-ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಆದರೆ ಈ ಬಂದ್ ಹೈದರಾಬಾದ್ನಲ್ಲಿ ಯಾವುದೇ ಪರಿಣಾಮ ಬೀರಿಲ್ಲ, ಅಲ್ಲಿ ಎಂದಿನಂತೆ ವ್ಯಾಪಾರ-ವಹಿವಾಟು ನಡೆಯುತ್ತಿದೆ.
ವಾರಂಗಲ್ನ ಮೆಹಬೂಬಾನಗರದಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಜಗನ್ ಅಂಗರಕ್ಷಕ ಗುಂಡಿನ ದಾಳಿ ನಡೆಸಿ ಸಾವನ್ನಪ್ಪಲು ಕಾರಣವಾಗಿದ್ದ ಘಟನೆಯನ್ನು ಖಂಡಿಸಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಮತ್ತು ಇನ್ನುಳಿದ ತೆಲಂಗಾಣ ಪರ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದವು.