ಗುಜರಾತ್ ಅಭಿವೃದ್ಧಿ ಕಾರ್ಯದಲ್ಲಿ ಕೇಂದ್ರದ ಆಡಳಿತಾರೂಢ ಯುಪಿಎ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಗುಜರಾತ್ ವಿರೋಧಿ ಧೋರಣೆ ಅನುಸರಿಸುತ್ತಿರುವ ನೆಲೆಯಲ್ಲಿ ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ. ನೆರೆಯ ಮಹಾರಾಷ್ಟ್ರದ ನಾಗಪುರ್ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಹಾಗಾಗಿ ಸರ್ಕಾರ ಹಠತೊಟ್ಟು ಬಿಹಾರ ಮತ್ತು ಜಾರ್ಖಂಡ್ನಿಂದ ಕಲ್ಲಿದ್ದಲು ಖರೀದಿಸುತ್ತಿದೆ ಎಂದು ಮೋದಿ ಹೇಳಿದರು.
ಕಲ್ಲಿದ್ದಲನ್ನು ದೂರದಿಂದ ತರಿಸುತ್ತಿರುವುದರಿಂದಾಗಿ ಸಾಗಣೆ ವೆಚ್ಚವೂ ಅಧಿಕವಾಗಿ, ವಿದ್ಯುತ್ ದರದ ಹೊರೆ ಜನಸಾಮಾನ್ಯರ ಮೇಲೆ ಬೀಳುವಂತಾಗಿದೆ. ಆದರೆ ಕೇಂದ್ರ ಸರ್ಕಾರ ಏನೇ ಅಡ್ಡಗಾಲು ಹಾಕಿದರೂ ಗುಜರಾತ್ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಮೋದಿ ಕೇಂದ್ರಕ್ಕೆ ತಿರುಗೇಟು ನೀಡಿದ್ದಾರೆ.
ವಿದ್ಯುತ್ ಅಭಾವ ನೀಗಿಸುವ ಸಲುವಾಗಿ ರಾಜ್ಯದ ದಕ್ಷಿಣ ಪ್ರದೇಶದಲ್ಲಿ 500ಮೆಗಾ ವ್ಯಾಟ್ನ ಎರಡು ವಿದ್ಯುತ್ ಘಟಕಗಳನ್ನು ನಿರ್ಮಿಸುವುದಾಗಿ ಹೇಳಿದರು. ಹತ್ತಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಪರಿಣಾಮವಾಗಿಯೂ ರಾಜ್ಯದ ರೈತರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ರಾಜ್ಯದ ರೈತರು ಉತ್ತಮ ದರ್ಜೆಯ ಹತ್ತಿಯನ್ನು ಉತ್ಪಾದಿಸುತ್ತಿದ್ದು, ಪ್ರಪಂಚದ ವಿವಿಧ ದೇಶಗಳಿಗೆ ಹತ್ತಿಯನ್ನು ರಫ್ತು ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಹತ್ತಿ ರಫ್ತಿಗೆ ನಿಷೇಧ ಹೇರಿದ್ದರಿಂದ ಹೆಚ್ಚಿನ ತೊಂದರೆಗೆ ಒಳಗಾಗುವಂತಾಗಿದೆ ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದರು.