ಪ್ರಶ್ನೆಪತ್ರಿಕೆಯಲ್ಲಿ ವಾಜಪೇಯಿ, ಮುಖರ್ಜಿ ಹೆಸರು: ಕಾಂಗ್ರೆಸ್ ಕೆಂಡ
ಭೋಪಾಲ, ಶುಕ್ರವಾರ, 4 ಜೂನ್ 2010( 13:43 IST )
ಪ್ರಶ್ನೆಪತ್ರಿಕೆಯಲ್ಲಿ ಕೇಳಲಾಗಿರುವ 'ಜನ ಸಂಘದ ಸಂಸ್ಥಾಪಕ ಯಾರು? ಏಕೀಕೃತ ಮಾನವತಾವಾದವನ್ನು ಪ್ರತಿಪಾದಿಸಿದವರು ಯಾರು? ಡಿಸೆಂಬರ್ 25ರಂದು ಜನಿಸಿದ ರಾಜಕೀಯ ಮುಖಂಡ ಯಾರು?' ಎಂಬಿತ್ಯಾದಿ ಪ್ರಶ್ನೆಗಳು ಕಾಂಗ್ರೆಸ್ನ ಕಣ್ಣು ಕೆಂಗಣ್ಣು ಮಾಡಿವೆ. ಶ್ಯಾಮಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಎಂಬುದು ಈ ಪ್ರಶ್ನೆಗಳಿಗೆ ಉತ್ತರಗಳಾದರೂ, ಇವೆಲ್ಲವೂ ಆರೆಸ್ಸೆಸ್ ತತ್ವಗಳನ್ನು ಪ್ರಚಾರ ಮಾಡುವ ಪ್ರಯತ್ನ ಎಂದು ಅದು ಆರೋಪಿಸಿದೆ.
ಮಧ್ಯಪ್ರದೇಶದ ಮಖನ್ಲಾಲ್ ಚತುರ್ವೇದಿ ರಾಷ್ಟ್ರೀಯ ವಿವಿಯ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗವು ನಡೆಸಿದ ಪರೀಕ್ಷೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗಿತ್ತು.
ಅಂತೆಯೇ ಮತ್ತೊಂದು ಪ್ರಶ್ನೆ, ಸ್ವರ್ಣಿಮ್ ಮಧ್ಯಪ್ರದೇಶದ ಕುರಿತು ಪ್ರಬಂಧ ಬರೆಯಿರಿ ಎಂಬುದು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಭಿವೃದ್ಧಿ ಯೋಜನೆ.
ನೇಮಕಾತಿ ಸಹಾಯಕರ ಹುದ್ದೆಗೆ ನಡೆಸಲಾದ ಪರೀಕ್ಷೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗಿದ್ದು, 125 ಮಂದಿ ಹಾಜರಾಗಿದ್ದರು. ಈ ಪ್ರಶ್ನೆಗಳು ನಿರ್ದಿಷ್ಟ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ ಎಂದು ಕಾಂಗ್ರೆಸ್ ವಕ್ತಾರ ಕೆ.ಕೆ.ಮಿಶ್ರಾ ಆರೋಪಿಸಿದ್ದು, ಈ ಬಗ್ಗೆ ಉಪಕುಲಪತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕುಲಪತಿ ಪ್ರೊ.ಬಿ.ಕೆ.ಕುತಿಯಾಲಾ ಅವರು, ನಾಲ್ಕು ಮಂದಿ ಪತ್ರಕರ್ತರು ಸಿದ್ಧಪಡಿಸಿದ ಪ್ರಶ್ನೆಗಳಿಂದಲೇ ಆರಿಸಿ ಈ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿದೆ. ಇವೇಕೆ ಸಾಮಾನ್ಯ ಜ್ಞಾನ ಪ್ರಶ್ನೆಗಳಾಗಬಾರದು? ಬನಾರಸ್ ಹಿಂದೂ ವಿವಿಯ ಸಂಸ್ಥಾಪಕ ಯಾರು ಎಂಬ ಪ್ರಶ್ನೆಯನ್ನೂ ಕಾಂಗ್ರೆಸ್ ಯಾಕೆ ವಿರೋಧಿಸುತ್ತಿದೆ ಎಂದು ಕೇಳಿದರು.
ಈ ಬಗ್ಗೆ ಆಡಳಿತಾರೂಢ ಬಿಜೆಪಿ ವಕ್ತಾರರು ಪ್ರತಿಕ್ರಿಯಿಸಿ, ಈ ಪ್ರಶ್ನೆಗಳು ಯಾವುದೇ ಅಪರಾಧಿಗಳಿಗೆ ಸಂಬಂಧಪಟ್ಟದ್ದಲ್ಲ, ದೇಶದ ಮಹಾನ್ ನಾಯಕರ ಕುರಿತಾಗಿ ಕೇಳಲಾಗಿದೆ. ನೆಹರು-ಗಾಂಧಿ ಕುಟುಂಬದ ಕುರಿತಾಗಿ ಮಾತ್ರವೇ ಪ್ರಶ್ನೆಗಳಿರಬೇಕೇ ಎಂದು ವ್ಯಂಗ್ಯವಾಡಿದ್ದಾರೆ.