ಅಜ್ಮೀರ್ ಮತ್ತು ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟಗಳ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಕೈ ಚೆಲ್ಲಿ ಕುಳಿತಿದ್ದಾರೆ. ಕಾರಣ ಸ್ವಾಮಿ ಆಸೀಮಾನಂದ್ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದು. ಅವರ ಪ್ರಕಾರ ದೇಶದಲ್ಲಿ ಹಿಂದೂ ಬಲಪಂಥೀಯ ಸಂಘಟನೆಗಳಿಂದ ನಡೆಸಲ್ಪಡುತ್ತಿರುವ ದುಷ್ಕೃತ್ಯಗಳು ಈ ಸ್ವಾಮಿಯಿಂದ ನಿಯಂತ್ರಿಸಲ್ಪಡುತ್ತಿವೆ.
ಆದರೂ ನಾವು ತನಿಖೆಗಳನ್ನು ಮುಂದುವರಿಸುತ್ತೇವೆ. ಈ ಎಲ್ಲಾ ಸಂದರ್ಭಗಳಲ್ಲಿ ನಮಗೆ ಆಗಾಗ ಕೇಳಿ ಬರುತ್ತಿರುವ ಪ್ರಮುಖ ಹೆಸರು ಸ್ವಾಮಿ ಆಸೀಮಾನಂದ್ ಎಂದು ಸಿಬಿಐ ಮೂಲಗಳು ಆಂಗ್ಲ ಸುದ್ದಿ ವೆಬ್ಸೈಟ್ 'ರೀಡಿಫ್'ಗೆ ತಿಳಿಸಿದ್ದಾರೆ.
ಈ ಹೆಸರು ಮೊದಲ ಬಾರಿ ಕೇಳಿ ಬಂದದ್ದು ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ. ತನಿಖಾಧಿಕಾರಿಗಳ ಪ್ರಕಾರ ಹೈದರಾಬಾದ್ನ ಮೆಕ್ಕಾ ಮಸೀದಿ ಮತ್ತು ಅಜ್ಮೀರ್ ಸ್ಫೋಟಗಳ ಬಗ್ಗೆ ಸ್ವಾಮಿ ಹೆಚ್ಚಿನ ಮಾಹಿತಿ ಹೊಂದಿದ್ದಾರೆ.
ಈ ಸಂಬಂಧ ಹಲವು ಸಾಕ್ಷ್ಯಗಳನ್ನೂ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಮಾಲೆಗಾಂವ್ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಅವರ ಜತೆ ಸ್ವಾಮಿ ನಡೆಸಿರುವ ದೂರವಾಣಿ ಮಾತುಕತೆಗಳೂ ಸಿಬಿಐನಲ್ಲಿದೆ.
ಮಾಲೆಗಾಂವ್ ಸ್ಫೋಟಕ್ಕೂ ಮೊದಲು ಸಾಧ್ವಿಗೆ ಸ್ವಾಮಿ ಕರೆ ಮಾಡಿ ಸಂಭಾಷಣೆ ನಡೆಸಿದ್ದನ್ನು ಮುಂಬೈಯ ಉಗ್ರ ನಿಗ್ರಹ ದಳವು ದಾಖಲು ಮಾಡಿಕೊಂಡಿತ್ತು. ಅಲ್ಲದೆ ಸ್ಫೋಟಕ್ಕೂ ಮೊದಲು ಉಭಯರು ಭೇಟಿಯಾಗಿ ಮಾತುಕತೆ ನಡೆಸಿದ ಮಾಹಿತಿಗಳನ್ನೂ ತನಿಖಾಧಿಕಾರಿಗಳು ಕಲೆ ಹಾಕಿದ್ದಾರೆ.
ಸಿಬಿಐ ಅಧಿಕಾರಿಗಳ ಪ್ರಕಾರ ಆಸೀಮಾನಂದ್ ಮೂಲತಃ ಪಶ್ಚಿಮ ಬಂಗಾಲದವರು. ಆದರೆ ಅಲ್ಲಿನ ಕಮ್ಯೂನಿಸ್ಟ್ ಆಡಳಿತದಿಂದ ರೋಸಿ ಅಲ್ಲಿಂದ ತನ್ನ ಕಾರ್ಯಸ್ಥಳವನ್ನು ಗುಜರಾತಿಗೆ ಬದಲಾಯಿಸಿ ದೇವಮಾನವ ಎನಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಹಿಂದೂ ಸಮುದಾಯದ ಹಲವು ತೀವ್ರವಾದಿಗಳ ಜತೆ ಸ್ವಾಮಿ 'ಇಸ್ಲಾಮಿಕ್ ಭಯೋತ್ಪಾದನೆ' ಅಪಾಯಕಾರಿಯಾಗಿ ಬೆಳೆಯುತ್ತಿರುವ ಕುರಿತು ಚರ್ಚೆ ನಡೆಸಿದ್ದಾರೆ.
ಇದೇ ಹೊತ್ತಿನಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಸ್ವಾಮಿ ಭೇಟಿ ಮಾಡಿದ್ದಾರೆ. ಇಬ್ಬರದ್ದೂ ಒಂದೇ ರೀತಿಯ ಮನಸ್ಥಿತಿಯಾಗಿದ್ದುದರಿಂದ ಹಿಂಸಾಚಾರವನ್ನು ಹಿಂಸಾಚಾರದ ಮೂಲಕವೇ ಬಗ್ಗುಬಡಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ ಸ್ವಾಮಿಯೇ ಪ್ರಮುಖ ರೂವಾರಿ. ಗೋವಾ, ಅಜ್ಮೀರ್ ಮತ್ತು ಹೈದರಾಬಾದ್ ಸ್ಫೋಟ ಶಂಕಿತರಾದ ದೇವೇಂದ್ರ ಮತ್ತು ಚಂದ್ರಶೇಖರ್ ಮುಂತಾದವರಿಗೆ ಇವರು ಗುರುವಿನಂತೆ. ಸ್ವಾಮಿ ಪ್ರಸಕ್ತ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಈ ಇಬ್ಬರೂ ಆರೋಪಿಗಳನ್ನೂ ತೀವ್ರವಾಗಿ ವಿಚಾರಿಸಿದ್ದಾರೆ. ಅವರಿಂದ ಬಂದ ಮಾಹಿತಿ, ತಾವು ಕೊನೆಯ ಬಾರಿ ಅವರ ಬಗ್ಗೆ ಕೇಳಿದ್ದು ಗುಜರಾತ್ನಲ್ಲಿದ್ದಾರೆಂದು.
ಆದರೆ ಸ್ವಾಮಿ ಈಗ ತನ್ನ ವಾಸಸ್ಥಳವನ್ನು ಬದಲಾಯಿಸಿದ್ದಾರೆ. ಎಲ್ಲಿಗೆ ಹೋಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಿಬಿಐಗೆ ಸಾಧ್ಯವಾಗುತ್ತಿಲ್ಲ. ಅವರ ಪ್ರಕಾರ ಸ್ವಾಮಿ ಸ್ಥಳೀಯ ಬುಡಕಟ್ಟು ಜನಾಂಗಗಳ ಜತೆ ಅತ್ಯುತ್ತಮ ಸಂಬಂಧ ಹೊಂದಿದ್ದು, ಅಲ್ಲೇ ಎಲ್ಲಾದರೂ ತಲೆ ಮರೆಸಿಕೊಂಡಿರಬಹುದು.