ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆ ಸ್ಫೋಟ; ಶಂಕಿತ ಉಗ್ರ ಸಮದ್ ಭಟ್ಕಳ್‌ಗೆ ಜಾಮೀನು (German Bakery blast | Abdul Samad Bhatkal | Karnataka | ATS Maharashtra)
Bookmark and Share Feedback Print
 
ಪುಣೆ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಪಾತ್ರವಹಿಸಿದ್ದಾನೆ ಎಂದು ಶಂಕಿಸಲಾಗಿರುವ ಭಟ್ಕಳದ ಶಂಕಿತ ಉಗ್ರ ಅಬ್ದುಲ್ ಸಮದ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದಿರುವ ನ್ಯಾಯಾಲಯವು ಆತನಿಗೆ ಜಾಮೀನು ನೀಡಿದ್ದು, ಮಹಾರಾಷ್ಟ್ರ ಉಗ್ರ ನಿಗ್ರಹ ದಳವು ತೀವ್ರ ನಿರಾಸೆ ಅನುಭವಿಸಿದೆ.

2009ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ ಸಮದ್ ಉತ್ತರ ಕರ್ನಾಟಕದ ಭಟ್ಕಳ ನಿವಾಸಿ. ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿರುವ ಸಮದ್ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲದ ಕಾರಣ ಆತನನ್ನು ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಎಲ್. ಪಠಾಣ್ ಬಿಡುಗಡೆಗೆ ಆದೇಶ ನೀಡಿದರು.

ದುಬೈಯಿಂದ ಸಮದ್ ವಾಪಸ್ ಬರುತ್ತಿರುವ ಕುರಿತು ಮಾಹಿತಿ ಪಡೆದುಕೊಂಡಿದ್ದ ಮಹಾರಾಷ್ಟ್ರ ಉಗ್ರ ನಿಗ್ರಹ ದಳ (ಎಟಿಎಸ್) ಮೇ 25ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಿತ್ತು. ಸಮದ್ 2009ರ ಆಗಸ್ಟ್‌ನಲ್ಲಿ ದಕ್ಷಿಣ ಮುಂಬೈಯಿಂದ ಬಂಧಿತರಾದ ಮೂವರು ವ್ಯಕ್ತಿಗಳಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪಗಳನ್ನು ಎದುರಿಸುತ್ತಿದ್ದ.

ಆದರೆ ಸಮದ್ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ ಎಂಬುದನ್ನು ನ್ಯಾಯಾಧೀಶರು ಪುರಸ್ಕರಿಸಿದ್ದು, 25,000 ರೂಪಾಯಿಗಳ ಆಧಾರದ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಸಮದ್ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿ ಎಂದು ಘೋಷಿಸಿದ್ದನ್ನು ಕೂಡ ಅಧಿಕೃತವಾಗಿ ಎಟಿಎಸ್ ನ್ಯಾಯಾಲಯಕ್ಕೆ ತಿಳಿಸಿರಲಿಲ್ಲ. ಕೇವಲ ಆರಿಫ್ ಮಿರ್ಜಾ ಬೇಗ್ ಎಂಬಾತನನ್ನು ಮಾತ್ರ ಈ ರೀತಿ ಎಟಿಎಸ್ ನ್ಯಾಯಾಲಯಕ್ಕೆ ಹೇಳಿತ್ತು. ಇದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯ, ಈ ಹಿಂದೆ ಮೂವರು ಸಹ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವಂತೆ ಸಮದ್‌ಗೂ ಜಾಮೀನು ನೀಡಿತು.

ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ 17 ಮಂದಿಯ ಸಾವಿಗೆ ಕಾರಣವಾಗಿದ್ದ ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಸುಳಿವುಗಳು ಲಭಿಸಿವೆ ಎಂದಿದ್ದ ಎಟಿಎಸ್ ಸಮದ್‌ನನ್ನು ಬಂಧಿಸಿತ್ತು. ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಕೂಡ ಎಟಿಎಸ್ ಮುನ್ನಡೆ ಸಾಧಿಸಿದ್ದನ್ನು ಹೇಳಿದ್ದರು. ಆದರೆ ನಂತರ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದ ಸಚಿವಾಲಯ, ಪೊಲೀಸರು ಎಲ್ಲಾ ವಾಸ್ತವಾಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕೆಂದು ಹೇಳಿತ್ತು.

ಭೂಗತ ಪಾತಕಿ ಛೋಟಾ ಶಕೀಲ್ ಅನುಚರನಾಗಿರುವ ಸಮದ್, ಕಳೆದ ವರ್ಷದ ಆಗಸ್ಟ್ ಐದರಂದು ಮುಂಬೈಯ ಮಜ್ಗಾನ್ ಹೊಟೇಲ್‌ನಲ್ಲಿ ಬಂಧಿತರಾಗಿದ್ದ ಹಾಜಿ ಇಮ್ರಾನ್, ಸುಲೇಮಾನ್ ಪಟೇಲ್ ಮತ್ತು ಅಫ್ಜಲ್ ಶೇಖ್ ಎಂಬ ಮೂವರಿಗೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಎಂದು ಎಟಿಎಸ್ ಆರೋಪಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ