ಆಂಡರ್ಸನ್ ಭಾರತದಲ್ಲೇ ಇದ್ದಿದ್ರೆ ಕೊಲೆ ಮಾಡುತ್ತಿದ್ರು!:ಕಾಂಗ್ರೆಸ್
ನವದೆಹಲಿ, ಗುರುವಾರ, 17 ಜೂನ್ 2010( 09:45 IST )
ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಭೋಪಾಲ್ ಅನಿಲ ದುರಂತ ಪ್ರಕರಣದ ಪ್ರಮುಖ ಆರೋಪಿ ವಾರೆನ್ ಆಂಡರ್ಸನ್ನನ್ನು ಭಾರತದಿಂದ ಹೊರ ಹೋಗಲು ಯಾಕೆ ಅವಕಾಶ ಮಾಡಿಕೊಡಲಾಯಿತು ಎಂಬುದಕ್ಕೆ ಮತ್ತೊಂದು ಕುಂಟು ನೆಪದ ವಿವರ ಹೇಳಿದ್ದು, ಅನಿಲ ದುರಂತ ನಡೆದ ನಂತರ ವಾರೆನ್ ಭಾರತದಲ್ಲೇ ಉಳಿದಿದ್ದರೆ ಆಕ್ರೋಶಿತ ಜನರು ಆತನನ್ನು ಹತ್ಯೆಗೈಯುತ್ತಿದ್ದರು ಎಂದು ಮಧ್ಯಪ್ರದೇಶದ ಅಂದಿನ ಕಾಂಗ್ರೆಸ್ ಸರ್ಕಾರ ಸಿದ್ದಪಡಿಸಿದ ದಾಖಲೆ ತಿಳಿಸಿದೆ!.
ಭೋಪಾಲ್ ಅನಿಲ ದುರಂತದ ನಂತರ ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ಅಂದಿನ ಕಾಂಗ್ರೆಸ್ ಸರ್ಕಾರ ಸಿದ್ದಪಡಿಸಿದ ಆಂತರಿಕ ವರದಿಯಲ್ಲಿ ಇಂತಹದ್ದೊಂದು ಅಚ್ಚರಿಯ ಸಂಗತಿಯನ್ನು ಹೊರಹಾಕಿದೆ.
ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಅನಿಲ ದುರಂತದ ನಂತರ ಭೋಪಾಲ್ನಲ್ಲಿ ಉದ್ವಿಗ್ನ ಮತ್ತು ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಮಾಯಕರ ಸಾವು ಖಂಡಿಸಿ ಹಿಂಸಾಚಾರ ಭುಗಿಲೆದ್ದಿತ್ತು. ಇಂತಹ ಪರಿಸ್ಥಿತಿಯಲ್ಲಿ ಆಂಡರ್ಸನ್ ಭಾರತದಲ್ಲೇ ಉಳಿದಿದ್ದರೆ ಅವರನ್ನು ಆಕ್ರೋಶಿತ ಜನರ ಗುಂಪು ಕೊಂದೇ ಬಿಡುತ್ತಿತ್ತು. ಅಲ್ಲದೇ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡುತ್ತಿತ್ತು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮಧ್ಯಪ್ರದೇಶ ಸರ್ಕಾರ ವಾರೆನ್ ವಿದೇಶಕ್ಕೆ ಹೋಗಲು ಅನುವು ಮಾಡಿಕೊಡಲಾಗಿತ್ತು ಎಂದು ವರದಿ ವಿವರಿಸಿದೆ.
ಅಂದಿನ ಪರಿಸ್ಥಿತಿಯಲ್ಲಿ ಆಂಡರ್ಸನ್ ಭೋಪಾಲ್ ತೊರೆಯುವ ಅನಿವಾರ್ಯತೆ ಇದ್ದು, ಪರಿಸ್ಥಿತಿ ನಿಯಂತ್ರಿಸಬೇಕಾಗಿತ್ತು ಎಂದು ಸರ್ಕಾರ ವರದಿಯಲ್ಲಿ ಹೇಳಿದೆ. ಹಾಗೆಯೇ ಆಂಡರ್ಸನ್ಗೆ ಜಾಮೀನು ದೊರೆತದ್ದನ್ನು ಅಂದಿನ ಮುಖ್ಯಮಂತ್ರಿಯಾಗಿದ್ದ ಅರ್ಜುನ ಸಿಂಗ್ ನೇತೃತ್ವದ ಸರ್ಕಾರ ಸಮರ್ಥಿಸಿಕೊಂಡಿತ್ತು. ಆ ಕಾರಣಕ್ಕಾಗಿಯೇ ವಾರೆನ್ ವಿರುದ್ಧ 304ಎ ಅನ್ವಯ ಎಫ್ಐಆರ್ ದಾಖಲಿಸಲಾಗಿತ್ತು. ಇದು ಜಾಮೀನು ದೊರೆಯುವ ಆರೋಪವಾಗಿತ್ತು. ಅಲ್ಲದೇ ಜಾಮೀನು ಕೊಡಿಸುವ ನಿಟ್ಟಿನಲ್ಲಿಯೇ 304ಎ ಪ್ರಕರಣ ದಾಖಲಿಸಿದ್ದು ಸರಿಯಾದ ಕ್ರಮ ಎಂದು ಹೇಳಿತ್ತು.