ಜೆಡಿಯು ಮತ್ತು ಬಿಜೆಪಿ ನಡುವಿನ ಬಿರುಕು ದಿನೇದಿನೇ ಹೆಚ್ಚುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಕುಮಾರ್ ನೇತೃತ್ವದ ಬಿಹಾರ ಸರಕಾರಕ್ಕೆ ನೀಡಿರುವ ಬೆಂಬಲ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಯನ್ನು ಮುಂದುವರಿಸುವ ಕುರಿತು ನಿತಿನ್ ಗಡ್ಕರಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಕೋಸಿ ನದಿ ಪ್ರವಾಹ ಸಂತ್ರಸ್ತರಿಗೆಂದು ಗುಜರಾತ್ ನೀಡಿದ್ದ ನಿಧಿಯನ್ನು ವಾಪಸ್ ಮಾಡುವ ಮೂಲಕ ಉದ್ಧಟತನ ಪ್ರದರ್ಶಿಸಿರುವ ನಿತೀಶ್ ಕುಮಾರ್ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ. ಈ ಸಂಬಂಧ ರಾಜ್ಯ ಘಟಕದೊಂದಿಗೆ ಮಾತುಕತೆ ನಡೆಸಿದ ನಂತರ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮುಂದಿನ ನಡೆಯನ್ನು ನಿರ್ಧರಿಸುತ್ತಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಇಂತಹ ಬದಲಾವಣೆಗಳ ನಿರೀಕ್ಷೆಯಲ್ಲಿರುವ ನಿತೀಶ್, ಬಿಜೆಪಿ ತೆಗೆದುಕೊಳ್ಳಲಿರುವ ಯಾವುದೇ ನಿರ್ಧಾರಕ್ಕೂ ಸಿದ್ಧವಾದಂತಿದೆ. ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಚಿಂತೆ ನಮಗಿಲ್ಲ, ಆರಾಮವಾಗಿದ್ದೇವೆ ಎಂದಿದ್ದಾರೆ.
ಜೆಡಿಯು ಜತೆಗಿನ ಮೈತ್ರಿ ಮುಂದುವರಿಸುವ ಕುರಿತು ನಮ್ಮ ನಾಯಕ ಎಲ್.ಕೆ. ಅಡ್ವಾಣಿಯವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಈ ನಡುವೆ ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಪಿ. ಠಾಕೂರ್ ತಿಳಿಸಿದ್ದಾರೆ.
ಎನ್ಡಿಎ ಮೈತ್ರಿಕೂಟದಲ್ಲಾಗಿರುವ ಬೆಳವಣಿಗೆಗಳ ಕುರಿತು ಗಡ್ಕರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸುವಂತೆ ಅಡ್ವಾಣಿಯವರು ಸೂಚಿಸಿದ್ದಾರೆ. ಪಕ್ಷದ ಅಧ್ಯಕ್ಷರು ಅಡ್ವಾಣಿಯವರ ಸಲಹೆಯಂತೆ ಅಂತಿಮ ನಿರ್ಣಯಕ್ಕೆ ಬರಲಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ.
ಜೆಡಿಯು ಜತೆಗಿನ ಮೈತ್ರಿ ಮುಂದುವರಿಸಬೇಕೆಂದು ಬಿಜೆಪಿಯ ಮತ್ತು ಬಿಹಾರದ ಅಗ್ರ ನಾಯಕರು ಬಯಸುತ್ತಿದ್ದಾರೆ. ಅದೇ ಹೊತ್ತಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ. ಕಳೆದ 15 ವರ್ಷಗಳಿಂದ ಎನ್ಡಿಎ ಜತೆಗಿರುವ ಜೆಡಿಯುವನ್ನು ತಕ್ಷಣ ಹೊರಗೆ ಹಾಕಲು ಬಿಜೆಪಿ ಸಿದ್ಧವಿಲ್ಲ ಎಂದು ಮೂಲಗಳು ಹೇಳಿವೆ.
ಬಿಹಾರ ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಡಿಯುಗೆ ನಮ್ಮ ಬೆಂಬಲ ಮುಂದುವರಿಯುತ್ತದೆ. ಹಾಗೊಂದು ವೇಳೆ ನಮ್ಮನ್ನು ಹೊರತುಪಡಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಯು ನಿರ್ಧರಿಸಿ, ನಮ್ಮನ್ನು ಕಡೆಗಣಿಸಿದರೆ ನಾವು ಏಕಾಂಗಿಯಾಗಿ ಹೋರಾಡಲು ಸಿದ್ಧರಿದ್ದೇವೆ ಎಂದು ಬಿಜೆಪಿ ರಾಜ್ಯ ಘಟಕ ತಿಳಿಸಿದೆ.
ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ ಜತೆಗಿದ್ದ ಚಿತ್ರವೊಂದನ್ನು ಗುಜರಾತ್ ತನ್ನ ಪ್ರಚಾರ ಜಾಹೀರಾತಿನಲ್ಲಿ ಬಳಸಿಕೊಂಡಿದ್ದರಿಂದ ಆಕ್ರೋಶಗೊಂಡಿದ್ದ ಬಿಹಾರ ಮುಖ್ಯಮಂತ್ರಿ, ಈ ಹಿಂದೆ ಗುಜರಾತ್ ನೀಡಿದ್ದ ಕೋಸಿ ಪ್ರವಾಹ ನಿಧಿಯನ್ನು (ಐದು ಕೋಟಿ ರೂಪಾಯಿ) ವಾಪಸ್ ಮಾಡಿತ್ತು. ಅದರ ನಂತರ ಎರಡೂ ಪಕ್ಷಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.