ಭಾರತದ ಗೃಹ ಸಚಿವ ಪಿ. ಚಿದಂಬರಂ ಪಾಕಿಸ್ತಾನ ಆಂತರಿಕ ಸಚಿವ ರೆಹಮಾನ್ ಮಲಿಕ್ ಭೇಟಿಯ ಸಂದರ್ಭದಲ್ಲಿ ನಡೆದ ಪ್ರಸಂಗವಿದು. ಸಂಪ್ರದಾಯದಂತೆ ಉಭಯ ದೇಶಗಳ ರಾಷ್ಟ್ರಧ್ವಜಗಳನ್ನು ಇಲ್ಲಿ ಇಡಲಾಗಿತ್ತು. ಆದರೆ ಭಾರತದ ಧ್ವಜವನ್ನು ಉಲ್ಟಾ ಮಾಡಿ ಇರಿಸಲಾಗಿತ್ತು.
ಭಾರತ ಧ್ವಜಕ್ಕೆ ಪಾಕಿಸ್ತಾನ ಅಪಮಾನ ಎಸಗಿರುವುದು ಸ್ಪಷ್ಟವಾಗಿದ್ದರೂ, ಏನೂ ಆಗಿಲ್ಲವೆಂಬಂತೆ ಚಿದಂಬರಂ ಪ್ರತಿಕ್ರಿಯಿಸಿದ್ದಾರೆ. ಕಣ್ತಪ್ಪಿನಿಂದಾಗಿ ಧ್ವಜ ಮೇಲೆ ಕೆಳಗಾಗಿರುವುದು ಹೌದು, ಆದರೆ ಅದನ್ನು ಗಮನಕ್ಕೆ ಬಂದ ನಂತರ ಸರಿಪಡಿಸಲಾಯಿತು ಎಂದು ತಿಪ್ಪೆ ಸಾರಿಸಿದ್ದಾರೆ.
ಕಳೆದ ಮೂರು ದಶಕಗಳ ನಂತರ ಭಾರತದ ಗೃಹ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಈ ಆವಾಂತರ ಸೃಷ್ಟಿಯಾಗಿತ್ತು. ಇಸ್ಲಾಮಾಬಾದ್ ವಿಮಾನ ನಿಲ್ದಾಣದಿಂದಲೇ ಅವರನ್ನು ಸ್ವತಃ ಸಚಿವ ಮಲಿಕ್ ಸ್ವಾಗತಿಸಿ, ನಂತರ ಮಾತುಕತೆ ನಡೆಸಿದ್ದರು.
ತಿರಂಗವನ್ನು ಮೇಲೆ ಕೆಳಗೆ ಮಾಡಿ ಹಾರಿಸಲಾಗಿರುವ ಟಿವಿ ಚಾನೆಲ್ವೊಂದು ಪ್ರಸಾರ ಮಾಡಿರುವ ತುಣುಕು ರೆಹಮಾನ್ ಮಲಿಕ್ ಮತ್ತು ನನ್ನ ನಡುವಿನ ಸಮಾಲೋಚನೆಯ ಭಾಗ. ಅದು ನಮ್ಮ ಮಾತುಕತೆ ಆರಂಭದ ಮೊದಲ ದೃಶ್ಯವಾಗಿತ್ತು. ನಾವು ಕುಳಿತುಕೊಂಡ ತಕ್ಷಣವೇ ಧ್ವಜ ಉಲ್ಟಾ ಹಾರಿಸಲಾಗಿರುವುದು ನನ್ನ ಗಮನಕ್ಕೆ ಬಂತು. ಪ್ರಮಾದವನ್ನು ಸಂಬಂಧಪಟ್ಟವರ ಗಮನಕ್ಕೆ ಆಗಲೇ ತಂದೆ. ನಂತರ ಧ್ವಜವನ್ನು ಸರಿಪಡಿಸಲಾಯಿತು ಎಂದು ಚಿದಂಬರಂ ಸ್ಪಷ್ಟಪಡಿಸಿದ್ದಾರೆ.
ನಂತರ ನಡೆದ ನಿಯೋಗದ ಮಾತುಕತೆಯ ದೃಶ್ಯಗಳನ್ನು ನೀವು ಪ್ರಸಾರ ಮಾಡುತ್ತಿದ್ದರೆ, ಅಲ್ಲಿ ಧ್ವಜ ಸರಿಯಾಗಿ ಇಡಲ್ಪಟ್ಟಿರುವುದು ಗಮನಕ್ಕೆ ಬರುತ್ತಿತ್ತು. ಇದೊಂದು ಸಣ್ಣ ಪ್ರಮಾದ. ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಧ್ವಜವನ್ನು ಸರಿಪಡಿಸಿದ ನಂತರ, ನಿಯೋಗದ ಮಾತುತೆಯ ಸಂದರ್ಭದಲ್ಲಿನ ದೃಶ್ಯವನ್ನು ಪ್ರಸಾರ ಮಾಡುವಂತೆ ನಾನು ಆ ಚಾನೆಲ್ ಜತೆ ವಿನಂತಿಸಿದೆ ಎಂದು ಅವರು ವಿವರಣೆ ನೀಡಿದರು.
ಸಾರ್ಕ್ ಗೃಹ ಸಚಿವರುಗಳ ಸಮಾವೇಶಕ್ಕಾಗಿ ಪಾಕಿಸ್ತಾನಕ್ಕೆ ಎರಡು ದಿನಗಳ ಪ್ರವಾಸ ಮಾಡಿರುವ ಚಿದಂಬರಂ, ನಿನ್ನೆ ಸಂಜೆ ಪಾಕಿಸ್ತಾನ ಸಚಿವರನ್ನು ಭೇಟಿ ಮಾಡಿದ್ದರು.